ಹೂವು ಮತ್ತು ನಾವು
ಮೊನ್ನೆ ಹೀಗೆ ಸುಮ್ಮನೆ ಲಾಲ್ ಬಾಗ್ ಗೆ ಹೋಗಿದ್ದೆ. ಮೈಸೂರಿನ ಒಡೆಯರ್ ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಅರಳಿದ ಹೂವುಗಳಿಂದ ಅರಮನೆ ನಿರ್ಮಿಸುವ ಪ್ರಯತ್ನ ಅಲ್ಲಿತ್ತು. ಲಕ್ಷ - ಲಕ್ಷ ಹೂವುಗಳನ್ನು ಸೇರಿಸಿ ನಿರ್ಮಿಸಿದ ಆ 'ಪುಷ್ಪಜಾತ' ಕಲಾಕೃತಿಗಳು ಮನಸ್ಸನ್ನೇ ತೇಲುವಂತೆ ಮಾಡಿತು. ಹೂವಿಗಿರುವ ಶಕ್ತಿ ಅದು. ಹೂವು, ಕಾಣದ ಮನಸ್ಸನ್ನು ಸೆರೆಹಿಡಿದು ಕೊನೆಗೆ ನಮ್ಮನ್ನೇ ಮಾಯೆಗೊಳಪಡಿಸುತ್ತದೆ. ಲಾಲ್ ಬಾಗ್ ನ ಆ ಪುಷ್ಪರಾಶಿಯು ಹೂವಿನ ಬಗ್ಗೆ, ಹೂವಿನ ಸಾಮರ್ಥ್ಯದ ಬಗ್ಗೆ, ಹೂವು ನಮ್ಮ ಜೀವನದಲ್ಲಿ ಹಾಸುಹೊಕ್ಕಿರುವುದರ ಬಗ್ಗೆ ಚಿಂತನೆ ನೆಡೆಸುವಂತೆ ಪ್ರೇರೇಪಿಸಿತು. ಕಣ್ಣಿನಿಂದ ಸೆರೆಹಿಡಿಯಬೇಕಾದ ಹೂವಿನ ಸೌಂದರ್ಯವನ್ನು ಲೇಖನಿಯಿಂದ ಸೆರೆಹಿಡಿಯುವ ಒಂದು ಪ್ರಯತ್ನ ಇದು.
ಪ್ರಕೃತಿಯ ಸೊಬಗನ್ನು ಇಮ್ಮಡಿಗೊಳಿಸುವ ಅನೇಕ ಸಂಗತಿಗಳಲ್ಲಿ 'ಹೂವು' ಒಂದು. ಹೂವು ಸೌಂದರ್ಯದ ಸಾಕಾರ ರೂಪ. ಹೂವು ತಾನೂ ಅರಳಿ ನೋಡುಗರ ಕಣ್ಣನ್ನೂ ಅರಳಿಸುವ ಸಾಮರ್ಥ್ಯ ಹೊಂದಿದೆ. ಪ್ರತಿನಿತ್ಯ ಸೂರ್ಯನೊಂದಿಗೇ ಅರಳಿ ಸೂರ್ಯನೊಂದಿಗೇ ಅಳಿಯುವ ಈ ಹೂವುಗಳು ಪ್ರಕೃತಿಯ ವಿಸ್ಮಯಗಳಲ್ಲೊಂದಾಗಿವೆ.
![]() |
| ಬ್ರಹ್ಮಕಮಲ & ನೀಲ ಕುರಿಂಜಿ |
ಹೀಗೆ ಸೌಂದರ್ಯದ ಸಾಕಾರವಾಗಿರುವ ಹೂವುಗಳು ಮನಸ್ಸನ್ನು ವಿಕಸಿತಗೊಳಿಸುವುದರ ಜೊತೆಗೆ ಜೀವನ ಸಂದೇಶ ಸಾರುವ ಗುರುವೂ ಆಗಿವೆ. ಗುಲಾಬಿಯಂಬ ಒಂದು ಹೂವನ್ನು ಉದಾಹರಿಸಿ ಡಿ.ವಿ.ಜಿ. ಹೀಗೆ ಹೇಳುತ್ತಾರೆ.
ಹೂವ ತಳೆದ ಗುಲಾಬಿಯಿಂದ ಮನಕಹುದೇನು? |
ನೋವೋ? ಸಂತಸವೋ? ನೋಡಾಮುಳ್ಳು ಬಾಳ್ಗೆ ||
ಹೂವೆ ದಿವ್ಯಕೀರೀಟವದುವೆ ಕಾಲಕಟಾಕ್ಷ |
ಜೀವನದ ತಿರುಳಷ್ಟೆ - ಮಂಕುತಿಮ್ಮ ||
ಅಂದರೆ - ಹೂವನ್ನು ಹೊಂದಿರುವ ಗುಲಾಬಿ ಗಿಡವನ್ನು ನೋಡಿದಾಗ ನಮಗೆ ಏನನಿಸುತ್ತದೆ? ನೋವೋ? ಅಥವಾ ಸಂತೋಷವೋ? ಮುಳ್ಳುಗಳೇ ತುಂಬಿರುವ ಗಿಡಕ್ಕೆ ಹೂವೆ ಕಿರೀಟ! ಹಾಗೆ ನಾವು ಕಷ್ಟಗಳೆಂಬ ಮುಳ್ಳುಗಳನ್ನು ಸಹಿಸಿ ಜೀವನ ನೆಡೆಸಿದರೆ ಮುಂದೆ ಸುಖವೆಂಬ ಗುಲಾಬಿ ಹೂವು ದೊರಕುತ್ತದೆ - ಇದುವೇ ಗುಲಾಬಿ ನಮಗೆ ಸಾದರಪಡಿಸುವ ಜೀವನ ಸ್ವಾರಸ್ಯವಾಗಿದೆ.
ನಮ್ಮಲ್ಲಿ ಹೂವಿನಿಂದ ಹೊರತಾದ ಜೀವನವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಹುಟ್ಟಿನಿಂದ ಸಾಯುವವರೆಗೂ ಹೂವು ಬೇಕೇ ಬೇಕು. ಪೂಜೆ-ಪುನಸ್ಕಾರಗಳು ಹೂವುಗಳಿಲ್ಲದೆ ಅಪೂರ್ಣ. ಗೌರವ ಸಮರ್ಪಣೆಗೂ ಇದೇ ಹೂವುಗಳು ಬೇಕು. ಪ್ರೇಮಿಗಳಿಗೆ ಹೂವು ಪ್ರೇಮ ನಿವೇದನೆಯ ಮಾಧ್ಯಮ. ನಾವು ಮೊದಲರಾತ್ರಿಗೂ ಹೂವು ಉಪಯೋಗಿಸುತ್ತೇವೆ ಹಾಗೆ ಅಂತಿಮ ಯಾತ್ರೆಗೂ ಹೂವು ಬಳಸುತ್ತೇವೆ. ಹೂವು ನಮ್ಮಲ್ಲನೇಕರಿಗೆ ಜೀವನವನ್ನು ಕಟ್ಟಿಕೊಟ್ಟಿದೆ. ಪುಷ್ಪಕೃಷಿ ಇವತ್ತಿನ ಲಾಭದಾಯಕ ಕೃಷಿಗಳಲ್ಲೊಂದು. ಹೇಗೆ ಹೂವನ್ನು ಅನೇಕರು ಅನೇಕ ಕಾರಣಗಳಿಗಾಗಿ ಅಪ್ಪಿಕೊಳ್ಳುತ್ತಾರೆ.
![]() |
| ಅವರವರ ಭಾವಕ್ಕೆ - ಅವರವರ ಭಕುತಿಗೆ ! |
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ |
ಮಡದಿ ಮುಡಿದಿರುವ ಹೂ ಯುವಕನಿಗೆ ಚೆಂದ ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ |
ಬಿಡಿಗಾಸು ಹೂವಳಿಗೆ - ಮಂಕುತಿಮ್ಮ ||
ತಾತ್ಪರ್ಯ - ಪ್ರಕೃತಿಯನ್ನು ಪ್ರೀತಿಸುವವನು ಹೂವನ್ನು ಗಿಡದಲ್ಲಿ ನೋಡಿ ಸಂತೋಷಿಸುತ್ತಾನೆ, ಅದೇ ಹೊಸತಾಗಿ ಮದುವೆಯಾದವ ಹೂವನ್ನು ತನ್ನ ಹೊಂಡತಿಯ ಜಡೆಯಲ್ಲಿ ನೋಡಿ ಖುಷಿಪಡುತ್ತಾನೆ. ಹಾಗೆ, ದೈವಭಕ್ತನು ದೇವಸ್ಥಾನದಲ್ಲಿ ಸಿಗುವ ಹೂವನ್ನು ಪ್ರಸಾದವೆಂದು ಪಡೆದು ಧನ್ಯನಾಗುತ್ತಾನೆ. ಆದರೆ, ಅದೇ ಹೂವನ್ನು ಮಾರುವ ಹೂವಾಡಗಿತ್ತಿಗೆ ಹೂವು ಒಂದು ಬಿಡಿಗಾಸು ಮಾತ್ರ - ಅದೇ ಅವಳ ಜೀವನಾಧಾರ.
![]() |
| At Keukenhof |
ಕೊನೆಯ ಹನಿ - ಗುಲಾಬಿ ಗಿಡದಲ್ಲಿ ಹೂವಿದ್ದಾಗ ಯಾರೂ ಮುಳ್ಳನ್ನು ನೋಡುವುದಿಲ್ಲ, ಹೀಗೆ ಒಂದು ಗುಲಾಬಿ ತನ್ನ ಗಿಡದ ಎಲ್ಲ ಮುಳ್ಳುಗಳನ್ನು ಮುಚ್ಚಿಡುತ್ತದೆ. ಸೃಷ್ಟಿಯ ಈ ಸೂಕ್ಷ್ಮತೆಯನ್ನು ಅರ್ಥೈಸಿಕೊಳ್ಳೋಣ - ಭಾರತಮಾತೆಯ ಪದತಲದಲ್ಲಿ ನಾವೊಂದು ಗುಲಾಬಿಯಾಗೋಣ.
ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಶ್ರಾವಣ - ಪೂರ್ಣಿಮಾ.
೧೫-ಆಗಸ್ಟ್-೨೦೧೯, ಗುರುವಾರ.
ಬೆಂಗಳೂರು.



