ನನ್ನ ಆರು ತಿಂಗಳ ಮಗಳಿಂದ ನಾನು ಕಲಿತ ಆರು ಅಂಶಗಳು.
ನನ್ನ ಮಗಳು 'ವಿದಿತಾ' ಇಂದಿಗೆ ಆರು ತಿಂಗಳು ಪೂರೈಸಿದ್ದಾಳೆ....!! ಚಿಕ್ಕ ಮಕ್ಕಳೇ ಚೆಂದ. ಅವು ನಮ್ಮ ಜೊತೆಗಿದ್ದರೂ ಅವುಗಳದೇ ಲೋಕದಲ್ಲಿ ಇರುತ್ತವೆ. 'ಮಕ್ಕಳ ಲೋಕ' ನಾವು ಈಗ ಮರಳಿ ಹೋಗಲಾಗದ ಒಂದು ಲೋಕ. ಮಕ್ಕಳನ್ನು ಬೆಳೆಸುವುದು ಒಂದು ಜವಾಬ್ದಾರಿಯಾದರೂ, ಅವುಗಳ ಬೆಳವಣಿಗೆಯನ್ನು ಗಮನಿಸುವುದೇ ಒಂದು ಆನಂದ. ಮಕ್ಕಳು ದಿನದಿಂದ ದಿನಕ್ಕೆ ಹೊಸತನ್ನು ಕಲಿಯುತ್ತವೆ ಮತ್ತು ಬೆಳೆಯುತ್ತವೆ. ನನ್ನ ಮಗಳೂ ಬೆಳೆಯುತ್ತಿದ್ದಾಳೆ - ಈಗ ಆರು ತಿಂಗಳು ಪೂರೈಸಿದ್ದಾಳೆ...! ನಾವು ಅವಳಬೆಳವಣಿಗೆಯನ್ನು ಸಂತೋಷಿಸುತ್ತಿದ್ದೇವೆ. ಮಗಳಿಗೆ ಆರು ತಿಂಗಳು ತುಂಬಿದ ಈ ಸಂದರ್ಭದಲ್ಲಿ ನಾನು ಗಮನಿಸಿದ ಆರು ಅಂಶಗಳನ್ನು ಹಂಚಿಕೊಳ್ಳುತ್ತೇನೆ.
೧. ನಗು:- 'ಸಂತೋಷ' ಮಾನವನಿಗಾಗುವ ಒಂದು ಅನುಭವ - 'ನಗು' ಅದರ ಅಭಿವ್ಯಕ್ತಿ. ಮಕ್ಕಳಲ್ಲಿ ನಗು ಅತ್ಯಂತ ಸಹಜವಾಗಿರುತ್ತದೆ. ದೊಡ್ಡವರಲ್ಲಿ ನಗು ಯಾವಾಗಲು'ಸಹಜ' ಎಂದೆನಿಸುವುದಿಲ್ಲ. ನಾವು ಹಲವು ಬಾರಿ ನಗುವನ್ನು ಹಿಡಿದಿಟ್ಟುಕೊಳ್ಳುತ್ತೇವೆ ಅಥವಾ ಸುಮ್ಮನೆ ಒಂದು 'ಸ್ಮೈಲ್' ಕೊಡುತ್ತೇವೆ. ದೊಡ್ಡವರ ನಗು ಅವರಿಗಾದಅನುಭವವಾಗಿರದೆ ಎದುರು ನಿಂತಿರುವ ವ್ಯಕ್ತಿಗೆ ಕೊಡುವ ಪ್ರತಿಕ್ರಿಯೆಯಾಗಿರುವ ಸಂದರ್ಭವೇ ಹೆಚ್ಚು.
೨. ಅಳು:- 'ಅಳು' ಕೂಡ ಒಂದು ಅಭಿವ್ಯಕ್ತಿ. ಮಕ್ಕಳು ಅಳುವನ್ನು ಒಂದು ಸಂಪರ್ಕ ಸಾಧನವನ್ನಾಗಿ ಬಳಸುತ್ತವೆ. ಹಾಲು ಬೇಕಾದರೂ ಅಳುತ್ತವೆ, ನಿದ್ದೆ ಬಂದರೂ ಅಳುತ್ತವೆ, ಹೆದರಿಕೆಯಾದರೂ ಅಳುತ್ತವೆ. ಆ ಅಳುವಿನ ಮರ್ಮವನ್ನು ಅರಿಯಬೇಕಾದ್ದು ಪೋಷಕರ ಕರ್ತವ್ಯ..! ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬಹುದು. ಮಕ್ಕಳುಜೋರಾಗಿ ನಗುವುದಿಲ್ಲ, ಆದರೆ ಜೋರಾಗಿ ಅಳುತ್ತವೆ. ಇದು ಮನುಷ್ಯನ ಸಹಜ ಸ್ವಭಾವವೆನಿಸುತ್ತದೆ - ಮನುಷ್ಯ ತನ್ನ ಸಂತೋಷಕ್ಕಿಂತ ದುಖ್ಖದ 'ವ್ಯಾಖ್ಯಾನ' ಮಾಡುವುದೇಹೆಚ್ಚು. ...! ಅಲ್ಲವೇ?!
೩. ನಿದ್ದೆ:- ನಿದ್ದೆ ಮಾನವನ ದೇಹದ ಆವಶ್ಯಕತೆ. ಹಾಗಾಗಿ ಅವಶ್ಯವಿರುವಷ್ಟೇ ನಿದ್ದೆ ಮಾಡಬೇಕು. ಬೇರೆ ಏನೂ ಕೆಲಸವಿಲ್ಲದ ಮಕ್ಕಳು ಹೆಚ್ಚು ನಿದ್ದೆ ಮಾಡಿದರೂ ಕೂಡ, ನಿದ್ದೆ ಬಾರದೇ ಇದ್ದಾಗ ಹಾಸಿಗೆಯಲ್ಲಿ ಇರಲು ಇಷ್ಟಪಡುವುದಿಲ್ಲ. ನಿದ್ದೆ ಬಾರದೆ ಇದ್ದಾಗ - ಹಾಸಿಗೆಯಲ್ಲೇ ನಗುತ್ತವೆ, ಅಳುತ್ತವೆ, ಆಟವಾಡುತ್ತವೆ, ಆದರೆ ದೊಡ್ಡವರ ಹಾಗೆನಿದ್ದೆಯ 'ನಾಟಕ'ವಾಡುವುದಿಲ್ಲ...!
೪. ವಸ್ತುಗಳ ಮೌಲ್ಯ:- ವಸ್ತುಗಳ 'ಮೌಲ್ಯ'ವನ್ನು ಅವುಗಳ ದುಡ್ಡಿನ 'ಬೆಲೆ'ಯಿಂದ ಅಳೆಯುವ ಸ್ವಭಾವ ದೊಡ್ಡವರದು. ಮಕ್ಕಳು ಹಾಗಲ್ಲ, ಅವು ಆ ವಸ್ತುತನಗೆಷ್ಟರಮಟ್ಟಿಗೆ ಪ್ರಯೋಜನವೆಂದು ನೋಡುತ್ತವೆ. ಹತ್ತು ರೂಪಾಯಿಯ ಆಟದ ಸಾಮಾನು ಸಾವಿರ ರೂಪಾಯಿಯ ಆಟದ ಸಾಮನಿಗಿಂತ ಹೆಚ್ಚು ಹಿಡಿಸಬಹುದು.
೫. ಗ್ರಹಣಶೀಲತೆ:- ಮಕ್ಕಳು ನಿತ್ಯವೂ ಬೆಳೆಯುತ್ತವೆ ಏಕೆಂದರೆ ಅವು ಹೊಸತನ್ನು ಗಮನಿಸುತ್ತವೆ ಮತ್ತು ಗ್ರಹಿಸುತ್ತವೆ. ನಾವು ದೊಡ್ಡವರು - ಅನೇಕ ಸಂಗತಿಗಳನ್ನುನೋಡುತ್ತೇವೆ, ಆದರೆ ಗ್ರಹಿಸುವುದಿಲ್ಲ. ಹಾಗಾಗಿಯೇ ದೊಡ್ಡವರ ಬೆಳವಣಿಗೆ ಅನೇಕರಲ್ಲಿ 'ವಯಸ್ಸಿನ' ಬೆಳವಣಿಗೆಗಷ್ಟೇ ಸೀಮಿತ...!
೬. ಹಸಿವಾದರಷ್ಟೇ ಆಹಾರ:- ಮಕ್ಕಳು ತಮಗೆ ಹಸಿವಾದರಷ್ಟೇ ಹಾಲು ಕುಡಿಯುತ್ತವೆ. ಹಸಿವಿಲ್ಲವಾದರೆ ಸುತಾರಾಂ ಮುಟ್ಟುವುದಿಲ್ಲ. ಆದರೆ ದೊಡ್ಡವರಿಗೆ ಆಹಾರಸೇವಿಸಲು ಹಸಿವೇ ಆಗಬೇಕೆಂದಿಲ್ಲ..! ಅನೇಕ ಬಾರಿ ಸ್ನೇಹಿತರು, ಸಹೋದ್ಯೋಗಿಗಳು ಕರೆದರೆಂದು ಹೋಟೆಲ್ಲಿಗೆ ಹೋಗಿ ಗಡದ್ದಾಗಿ ತಿನ್ನುತ್ತೇವೆ. ಊಟದಸಮಯವಾಯಿತೆಂದರೆ ಊಟದ ಶಾಸ್ತ್ರ ಮುಗಿಸಿಬಿಡುತ್ತೇವೆ..! ನಮ್ಮ ನಿತ್ಯದ ಊಟದ ಸಮಯದಲ್ಲಿ 'ಮೀಟಿಂಗ್' ಇದೆಯಾದರೆ ಒಂದು ಘಂಟೆ ಮೊದಲೇ ಊಟಮುಗಿಸುತ್ತೇವೆ..! ಒಟ್ಟಿನಲ್ಲಿ ಊಟ ಮಾಡುತ್ತೇವೆ...!!
ಮುಗಿಸುವ ಮುನ್ನ: ನಾವು ಕೂಡ ಮಗುವಾಗಿದ್ದಾಗ 'ಸಹಜ ಧರ್ಮ'ವನ್ನು ಪಾಲಿಸುತ್ತಿದ್ದೆವು. ದೊಡ್ಡವರಾಗುತ್ತಾ 'ಅಸಹಜತೆ' ಕಡೆಗೆ ಹೋಗುತ್ತೇವೆ. ಅಥವಾ ಅಸಹಜತೆ ಕಡೆಗೆಹೋಗುವುದನ್ನೇ 'ದೊಡ್ಡವರಾಗುವುದು' ಎನ್ನುತ್ತೇವೆ. ಒಟ್ಟಿನಲ್ಲಿ ಸಹಜ ಜೀವನ ಮಕ್ಕಳಿಂದ ಕಲಿಯಬೇಕಾದ ಪಾಠ. ಪುನಃ ಮಗುವಾಗಿ ಮಕ್ಕಳ ಲೋಕಕ್ಕೆ ಹೋಗಲುಆಗದಿದ್ದರೂ, ಸಹಜತೆಯ ಕಡೆಗೆ ಹೋಗಲು ಪ್ರಯತ್ನಿಸಬೇಕಾಗಿದೆ.
ಹ.ನಾ.ಮಾಧವ ಭಟ್
ಪುಷ್ಯ-ಶುಕ್ಲ-ಏಕಾದಶೀ, ಗುರುವಾರ.
೧೭-೦೧-೨೦೧೯.
No comments:
Post a Comment