ನಾ ಕಂಡಂತೆ ಇಂದಿನ ರಾಜಕಾರಣ :
ಶುರುಮಾಡುವ ಮೊದಲು: "ಕಮಲ" ಕೆಸರಿನಿಂದ ಮೇಲೇಳುವ ಬದಲು, ಕೆಸರಿನೊಳಕ್ಕೇ ಹೊರಟಿದೆ...!
ತೆನೆಹೊತ್ತ ನಾರಿ, ತೆನೆಯನ್ನು ಕೆಳಗಿಟ್ಟು ತಿಂಗಳುಗಳೇ ಕಳೆದಿವೆ. ಈ ತೆನೆಹೊತ್ತ ನಾರಿ, ಪ್ರಾದೇಶಿಕವಾದ ತನ್ನ ಹೊರೆಯನ್ನು ರಾಷ್ಟ್ರೀಯವಾದ "ಕೈ"ಗಳಿಗೆ ಕೊಟ್ಟಿದೆ. ಇತ್ತ, ಕರ್ನಾಟಕದ ಕಮಲ 'ಗುರುಗ್ರಾಮ'ದಲ್ಲಿ ಮತ್ತೊಮ್ಮೆ ಅರಳುವ ಪ್ರಯತ್ನ ಮಾಡಿದೆ. ಇಲ್ಲಿನ "ಕೈ"ಯ ಕಾಲುಗಳು ರೆಸಾರ್ಟ್ ನತ್ತ ಹೆಜ್ಜೆ ಹಾಕಿವೆ. ತೆನೆ ಕೆಳಗಿಟ್ಟ ನಾರಿಯಂತೂತನ್ನ ಪಾಲಿನ ರೆಸಾರ್ಟ್ ಭಾಗ್ಯ ಯಾವಾಗ ಬರುತ್ತದೋ ಎಂದು ಕಾದು ಕುಳಿತಿದೆ. ಎಂದಿನಂತೆ, 'ಕಮಲ'ದ ಬೆಳೆಗಾರರು 'ಸ್ಥಳೀಯ ಕೃಷಿ'ಯನ್ನು ಮರೆತು, 'ರಾಷ್ಟ್ರೀಯಕೃಷಿ'ಯ ಬಗ್ಗೆ ಕನಸು ಕಾಣುತ್ತಿದ್ದಾರೆ. ಮತ್ತೊಂದೆಡೆ, ಕಾಲಿಲ್ಲದ 'ಕೈ'ಗಳು, 'ಆನೆ'ಯದೋ, 'ಸೈಕಲ್'ದೋ ಸಹಾಯ ಕೇಳಿ 'ಮಹಾಘಟ' ಎಂಬ ಬಂಧನದಲ್ಲಿ ಸಿಲುಕಿದೆ. ತೆನೆಹೊತ್ತ ನಾರಿಯಂತೂ ಇಲ್ಲಿನ ಬರಗಾಲ ಮರೆತು ಕೋಲ್ಕತ್ತಾದಲ್ಲಿ ರಚಿತವಾಗುತ್ತಿರುವ 'ಮಹಾ ಘಟ'ಕ್ಕೆ ತನ್ನದೂ ಒಂದು ಚಂಬು ನೀರು ಹಾಕಿ ಬಂದಿದೆ.
'ಕಮಲ'ದ ಬೆಳೆಗಾರರು ಒಬ್ಬ 'ಮೋಡಿ' ಮಾಡುವ ಮಾಂತ್ರಿಕನನ್ನೋ , ಇಲ್ಲ ಇನ್ನೊಬ್ಬ 'ಚಾಣಕ್ಯ'ನನ್ನೋ ನಂಬಿ ಕುಳಿತಿದ್ದಾರೆ. ಇನ್ನು, "ಕೈ"ಗಳಿಗಂತೂ, ತನ್ನ ತಲೆಯ ಮೇಲೆ"ರಾಹು"ವೇ ಕುಳಿತಂತಾಗಿದೆ. ಒಂದೇ ಕುಟುಂಬದಿಂದ ಪೋಷಿಸಲ್ಪಡುತ್ತಿರುವ 'ತೆನೆಹೊತ್ತ' ನಾರಿ ತಾನು 'ಕೈ' ಹಿಡಿದವರಿಂದ ಕಷ್ಟ ಪಡುತ್ತಿದ್ದಾಳೆ....!
ಒಟ್ಟಿನಲ್ಲಿ ಕನ್ನಡಿಗ "ಕನ್ಫ್ಯೂಸ್" ಆಗಿದ್ದರೆ, ಭಾರತೀಯ "ಭ್ರಾಂತ"ನಾಗಿದ್ದಾನೆ....!!!
ಹ.ನಾ.ಮಾಧವ ಭಟ್
No comments:
Post a Comment