Thursday, 12 September 2019

ಜೋಗ ಜಲಪಾತ

ಜೋಗದ ಸಿರಿ 


ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ|
ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ ||
ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ |
ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ ||
ಡಾ. ರಾಜ್ ಹಾಡಿದ ಈ ಹಾಡನ್ನು ಕೇಳುತ್ತಾ ನನಗೆ ಜೋಗ ನೋಡಬೇಕೆನಿಸಿತು. ಹಾಗೆಯೇ ಮೊನ್ನೆ ಜೋಗ ಜಲಪಾತವನ್ನು ನೋಡಲು ಹೋಗಿದ್ದೆ. ಧುಮ್ಮಿಕ್ಕುವ ಈ ಜಲಪಾತವನ್ನು ನೋಡಿ ನನಗನಿಸಿದ್ದು :
ಓ ಜೋಗ!
ನಾನೊಬ್ಬ ಪ್ರವಾಸಿಗ.
ನಾನೀಗ ನಿನ್ನ ನೋಡುಗ.
ಹೇಳತೀರದು ನಿನ್ನ ಸೊಬಗ!!

ಪ್ರಕೃತಿಯ ಮಡಿಲು ತಾಯಿಯ ಮಡಿಲಿನಷ್ಟೇ ಸಂತೋಷವನ್ನುಂಟು ಮಾಡುತ್ತದೆ. ಅದು ವರ್ಣಿಸಲು ಅಸಾಧ್ಯ - ಅದನ್ನು ಅನುಭವಿಸಿಯೇ ತಿಳಿಯಬೇಕು. ಹರಿಯುವ ನದಿ, ಧುಮ್ಮಿಕ್ಕುವ ಜಲಪಾತ, ಉದಯಿಸುವ ಸೂರ್ಯ, ಸಮುದ್ರ ತೀರದ ಸೂರ್ಯಾಸ್ತ, ಪರ್ವತ-ಶಿಖರ - ಅದರ ಮೇಲಣ ಮಂಜು - ಹೀಗೆ ಪ್ರಕೃತಿ ಅನೇಕ ವಿಭಿನ್ನ- ವಿಸ್ಮಯ-ವಿಚಿತ್ರ ಸಂತೋಷದ ಸ್ರೋತಗಳನ್ನು ಮಾನವನಿಗೆ ನೀಡಿದೆ. ಹೀಗಾಗಿ ನಾವು ಈ ಪ್ರಕೃತಿ ದೇವಿಗೆ ಆಭಾರಿಯಾಗಲೇ ಬೇಕು.

ಸಹ್ಯಾದ್ರಿ ಶ್ರೇಣಿ ಇಂತಹ ಅದೆಷ್ಟೋ ಕೌತುಕ ಗಳನ್ನು ತನ್ನ ಸೆರಗಿನಲ್ಲಿ ಇರಿಸಿಕೊಂಡಿದೆ. ಶಿವಮೊಗ್ಗೆಯ ಜೋಗ ಜಲಪಾತ ಅದರಲ್ಲಿ ಒಂದಷ್ಟೆ. ಜೋಗದ ಭೋರ್ಗರೆಯುವ ಜಲಪಾತ ನೋಡಿದಾಗ ನಾವು ನಮ್ಮನ್ನು ಮರತೇ ಬಿಡುತ್ತೇವೆ. ಅಂತಹ ರೋಮಾಂಚಕತೆ ಅಲ್ಲಿದೆ. ಮಳೆಗಾಲದಲ್ಲಿ ಶರಾವತಿ ಮಾಡುವ ರೌದ್ರ ನರ್ತನವದು. ಈ ನೈಜ ನರ್ತನವನ್ನು ನೋಡಲು ಬರುವ ಪ್ರವಾಸಿಗರೆಷ್ಟೋ! ಎಲ್ಲರ ಕಣ್ಮನ ತಣಿಸುತ್ತದೆ ಈ ಜಲಧಾರೆ. ಇದನ್ನು ನೋಡಿಯೇ ಅಲ್ಲವೇ ಹೇಳಿದ್ದು "ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ" ಎಂದು..!

ನದಿಯ ರೂಪದಲ್ಲಿ ಶಾಂತವಾಗಿ ಹರಿಯುವ ಶರಾವತಿಯ ನೀರು ೮೩೦ ಅಡಿ ಎತ್ತರದಿಂದ ಬೀಳುವಾಗ ರೂಪುಗೊಳ್ಳುವುದೇ ಈ ಜಗತ್ಪ್ರಸಿದ್ಧ ಜಲಪಾತ. ಇಂತಹ ಜಲಧಾರೆಯನ್ನು ಮಂಜಿನ ಮೋಡ ತನ್ನ ಸೆರಗಿನಿಂದ ಮುಚ್ಚುತ್ತದೆ. ಅತ್ತ ಗಾಳಿ ಅದನ್ನು ಸರಿಸಿ ನಮಗೆ ತೋರಿಸುತ್ತದೆ. ಇದರ ಮಧ್ಯೆ ಮಳೆರಾಯ ಮೇಲಿನಿಂದ ಇಣುಕುವ ಪ್ರಯತ್ನ ಮಾಡುತ್ತಾನೆ. ಹೀಗೆ ನೀರು, ಮೋಡ, ಗಾಳಿ, ಮಳೆಗಳ ಆಟವನ್ನು ನೋಡಿದಾಗ ಹೃದಯ ಅರಳುತ್ತದೆ, ಮನಸ್ಸು ಹಗುರ ವಾಗುತ್ತದೆ.

ಸದಾ ನಿಮ್ಮವ,
ಹ. ನಾ. ಮಾಧವ ಭಟ್
ಭಾದ್ರಪದ-ಶುಕ್ಲ-ಚತುರ್ದಶೀ
೨೦: ಸೆಪ್ಟೆಂಬರ್ : ೨೦೧೯, ಗುರುವಾರ.
ಸಾಗರ.