Saturday, 2 February 2019

Life: Sports and Sportiveness

।। ಆಟವಾಡದೇ ಇದ್ದರೂ, ಕ್ರೀಡಾ ಮನೋಭಾವ ನಮ್ಮದಾಗಿಸಿ ಕೊಳ್ಳೋಣ ।।

ತ್ತೀಚಿಗೆ ಕೆಲ ತಿಂಗಳುಗಳಿಂದ ವಾರಕ್ಕೆರಡು ಬಾರಿಯಂತೆ ಫುಟ್ಬಾಲ್ ಆಡಲು ಹೋಗುತ್ತಿದ್ದೇನೆ. ಆರಂಭದಲ್ಲಿ ಸ್ನೇಹಿತರ ಒತ್ತಾಯಕ್ಕೆ ಹೋಗಲು ಶುರು ಮಾಡಿದರೂ, ಇದುವರೆಗೂ ಒಂದೂ ಗೋಲ್ ಹೊಡೆಯದೆ ಇದ್ದರೂ, ಫುಟ್ಬಾಲ್ ಶೂ ಹಾಕಿ ರೊನಾಲ್ಡೊ ರೇಂಜ್ ಗೆ ಮೈದಾನಕ್ಕೆ ಇಳಿಯುತ್ತೇನೆ. ನನ್ನಂತೆ ಇನ್ನೂ ಕೆಲ ರೊನಾಲ್ಡೊಗಳು ಜೊತೆಗಿದ್ದಾರೆಂಬುದೇ ನನ್ನ ಧೈರ್ಯ. ಆದರೆ  ಅದೇನೋ ಗೊತ್ತಿಲ್ಲ, ಎರಡು ಗಂಟೆಗಳ ಆಟದ ನಂತರ ಮೈ-ಮನಸ್ಸುಗಳೆರಡೂ ಹಗುರವಾಗುವುದಂತೂ ನಿಶ್ಚಿತ....! ಆ ಎರಡು ಗಂಟೆಗಳ ಆಟ ಇಡೀ ದಿನದ, ಇಡೀ ವಾರದ ಚಿಂತೆಗಳನ್ನೆಲ್ಲಾ ದೂರ ಮಾಡುತ್ತದೆ. ನಾವು ಕ್ರೀಡಾಸ್ಫೋರ್ತಿಯನ್ನು ತೆಗೆದುಕೊಳ್ಳಲು ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಯ್ಲಿ ಯ ದರ್ಶನ ಮಾಡಬೇಕಿಲ್ಲ, ರೊನಾಲ್ಡೊ, ಸೆರೆನಾ ವಿಲಿಯಮ್ಸ್ ಆಟೋಗ್ರಾಫ್ ಪಡೆಯಬೇಕಿಲ್ಲ. ನಾವು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಸುತ್ತ ಮುತ್ತಲೇ ಒಬ್ಬ ಕ್ರಿಕೆಟಿಗನೋ, ಫುಟ್ಬಾಲ್ ಆಟಗಾರನೋ, ಚೆಸ್ ಚಾಂಪಿಯನ್ನೋ, ಕಬ್ಬಡ್ಡಿ ವೀರನೋ ಸಿಗುತ್ತಾನೆ..! ನಮ್ಮ ಜೊತೆ ಕೆಲಸ ಮಾಡುವ ಇಂತಹ ಕೆಲ ರೊನಾಲ್ಡೊಗಳೇ ನಮ್ಮ ಫುಟ್ಬಾಲ್ ಆಟಕ್ಕೆ ಪ್ರೇರಣೆ...!!

ಇಂದಿನ ದಿನಗಳಲ್ಲಿ ಪಾಠಗಳ ಹಾವಳಿಯಿಂದಾಗಿ ಆಟಗಳ ಸಂಖ್ಯೆ, ಉತ್ಸಾಹ ಎರಡೂ ಕೂಡಾ ಮಕ್ಕಳಲ್ಲಿಯೇ ಕಡಿಮೆಯಾಗಿದೆ. ಆಟಗಳ ಬಗೆಗಿನ ಒಟ್ಟಾರೆ ಕಲ್ಪನೆಯ ಕೊರತೆಯಿಂದಾಗಿ ಕ್ರಿಕೆಟ್ ಒಂದೇ ಆಟವಾಗಿರುವುದು ಕಂಡು ಬರುತ್ತದೆ. ಆದರೂ ಸಹ ಇತ್ತೀಚಿಗೆ ಕಬ್ಬಡ್ಡಿ & ಹಾಕಿಗಳು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿವೆ.

ಡಾ||ಹೆಡಗೇವಾರ್ 
ಆಟಗಳಿಂದ ನಾವು ಕಲಿಯುವ ಪಾಠ ಅನೇಕ. ಒಂದು ತಂಡ (ಟೀಮ್)ದ ಭಾಗವಾಗುವುದು ಹೇಗೆ ಎಂದು ಆಟಗಳು ಸುಲಭವಾಗಿ ಕಲಿಸಿಕೊಡುತ್ತವೆ. ಅದು ನಮ್ಮಲ್ಲಿರುವ ಒಂಟಿತನವನ್ನು ಹೋಗಲಾಡಿಸಿ, ಇತರರೊಂದಿಗೆ ಬೆರೆಯುವುದು ಹೇಗೆಂದು ಕಲಿಸುತ್ತದೆ. ಹೌದು, ಇನ್ನೂಚಿಕ್ಕವಳಾದ ನನ್ನ ಮಗಳು ಇಷ್ಟು ದಿನ ಒಬ್ಬಳೇ ತನ್ನ ಪಾಡಿಗೆ ತಾನು ಆಟವಾಡಿಕೊಳ್ಳುತ್ತಿದ್ದಳು, ಆದರೆ ಈಗ ದೊಡ್ಡವಳಾಗುತ್ತಾ ಆಟವಾಡಲು ಯಾರಾದರೂ ಬೇಕು ಎಂದು ಆಶಿಸುವುದನ್ನು ಗಮನಿಸುತ್ತಿದ್ದೇನೆ. ಆಟಗಳ ಆಕರ್ಷಣೆ ವ್ಯಕ್ತಿಗಳನ್ನು ಪರಸ್ಪರ ಹತ್ತಿರ ತರುತ್ತದೆ. ಹೀಗೆ ಕ್ರೀಡೆಗಳು ಕೇವಲ ಶಾರೀರಿಕ ವ್ಯಾಯಾಮವಾಗದೇ, ವ್ಯಕ್ತಿತ್ವ ನಿರ್ಮಾಣಕ್ಕೇ ಬುನಾದಿಯಾಗಬಹುದು. ಛತ್ರಪತಿ ಶಿವಾಜಿ ಮಹಾರಾಜರು ಸಾಮಾನ್ಯರಾದ  ವನವಾಸಿ ಮಾವಳಿ ಹುಡುಗರನ್ನು ಉತ್ಕೃಷ್ಟ ಸೈನಿಕರನ್ನಾಗಿ ಪರಿವರ್ತಿಸಿದ್ದು ಇದೆ ಆಟಗಳಿಂದ. ಡಾ||ಹೆಡಗೇವಾರ್ ಕೂಡ ಸಂಘಟನೆಯನ್ನು ಬೆಳೆಸಲು ಕ್ರೀಡೆಗಳನ್ನೇ ಸಾಧನವನ್ನಾಗಿ ಬಳಸಿದರು. ಹೀಗೆ ಆಟಗಳ ಶಕ್ತಿ ಅಪಾರ.

ಆಟಗಳು ಗೆಲುವು ಮತ್ತು ಸೋಲಿನ ರುಚಿ ತೋರಿಸಿಕೊಡುತ್ತವೆ. ಸೋತಾಗ ಕಹಿಯಾಗಿರುತ್ತದೆ, ಗೆದ್ದಾಗ ಸಿಹಿಯಾಗಿರುತ್ತದೆ. ಆದರೆ ಸೋತು ಗೆದ್ದಾಗ ಅದು ನವರಸ ಭಾರಿತವಾಗಿರುತ್ತದೆ - ಇದು ಆಟಗಳಿಂದ ಸಿಗುವ ಪಾಠ. ಈ ಸೋಲು-ಗೆಲುವುಗಳನ್ನು ಅರ್ಥೈಸಿಕೊಳ್ಳುವುದೇ "ಕ್ರೀಡಾ ಮನೋಭಾವ".  ಆದರೆ, ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬೆಳೆಯುವ ಮಕ್ಕಳಿಗೆ ಆಟವಾಡಲು ಶಾಲೆಗಳಲ್ಲಿ ಸರಿಯಾದ ಮೈದಾನಗಳಿಲ್ಲದಿರುವುದು ಇಂದಿನ ದುರಂತ. ಶಾಲೆಗಳು ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಗಳಂತೆ "ಕ್ರೀಡಾಂಗಣ" ಕೂಡ ಮಕ್ಕಳಿಗೆ ಅತ್ಯವಶ್ಯಕ ಎಂದು ಮನಗಾಣಬೇಕು. ಇನ್ನು ಕೆಲವು ಶಾಲೆಗಳಲ್ಲಿ, ವಸತಿ-ವಿದ್ಯಾಲಯಗಳಲ್ಲಿ ಮೈದಾನಗಳಿದ್ದೂ, ಸಿಲಬಸ್ ಎಂಬ ಸೈತಾನನಿಂದಾಗಿ ಮಕ್ಕಳು ಆಟವಾಡದಂತಾಗಿದೆ. ಪರಿಣಾಮವಾಗಿ ಕ್ರೀಡಾಮನೋಭಾವ ಕಡಿಮೆಯಾಗುತ್ತಿದೆ.

ಸುದ್ದಿ ಮಾಧ್ಯಮಗಳಲ್ಲಿ ನೋಡಿದಂತೆ, ಒಂದು ಅಂಕದಿಂದ ಫೇಲ್ ಅದರಿಂದ ಹಿಡಿದು ಅದೇ ಒಂದು ಅಂಕದಿಂದ ಮೊದಲ ರ‍್ಯಾಂಕ್‌ ತಪ್ಪಿಸಿಕೊಂಡವರವರೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಸರಿಯಾಗಿ ರೂಪಿಸದ ಪೋಷಕರ, ಅಧ್ಯಾಪಕರ, ಶಾಲಾ-ಕಾಲೇಜುಗಳ, ಒಟ್ಟಾರೆ ಸಮಾಜದ ಬೇಜವಾಬ್ದಾರಿ ನೆಡೆ ಎಂದೆನಿಸುತ್ತದೆ.

ನಾವು ದೊಡ್ಡವರಾಗುತ್ತಾ ಆಟ ಆಡುವುದನ್ನು ಕಡಿಮೆ ಮಾಡುತ್ತೇವೆ - ಮುಂದುವರಿದು ನಿಲ್ಲಿಸಿಯೇ ಬಿಡುತ್ತೇವೆ. ಇನ್ನು ಕೆಲವರಂತೂ, ಆಟವಾಡುವುದು ಮಕ್ಕಳು ಮಾತ್ರವೆಂದು ನಂಬಿ - 'ಆಟವಾಡಲು ನಾವೇನು ಮಕ್ಕಳೇ?!' ಎಂಬ ಉದ್ಗಾರ ತೆಗೆಯುತ್ತಾರೆ. ಇಂದು ದೊಡ್ಡವರಲ್ಲಿ ಕೂಡ ಕ್ರೀಡಾ ಮನೋಭಾವ ಕಡಿಮೆಯಾಗಿರುವುದು ಅನುಭವಕ್ಕೆ ಬರುತ್ತದೆ. ಅನಾವಶ್ಯಕ ಸ್ಪರ್ಧೆ, ಸೋಲಿನ ಸೇಡು, ಗೆಲುವಿಗಾಗಿ ಅಡ್ಡದಾರಿ ಇವೆಲ್ಲವೂ ಬದುಕೆಂಬ ಆಟವನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಮಾನಸಿಕ ಸ್ಥಿತಿಗಳಾಗಿವೆ. ಮೈದಾನದಲ್ಲಿ ಆಡುವುದರ ಜೊತೆಗೆ, ಬದುಕೆಂಬ ಆಟವನ್ನು "ಕ್ರೀಡಾ ಸ್ಫೂರ್ತಿ"ಯಿಂದಲೇ ಆಡೋಣ. ಗೆದ್ದರೆ ಖುಷಿ ಪಡೋಣ, ಸೋತರೆ ಇನ್ನೂ ಸಂತೋಷಿಸೋಣ, ಏಕೆಂದರೆ ಸೋಲಿನ ನಂತರದ ಗೆಲುವಿನ ರುಚಿ ಅನುಭವಿಸಿದವರಿಗಷ್ಟೇ ತಿಳಿದ ರಹಸ್ಯ...!!

ಆಶಯ: 30x40  ಕೊಠಡಿಯಲ್ಲಿ ಕಲಿತು, 30x40  ಮನೆಯಲ್ಲಿ ವಾಸಮಾಡಿ, ದೊಡ್ಡ ಕಂಪನಿ ಗಳ ಬೃಹದಾಕಾರದ ಕಟ್ಟಡಗಳಲ್ಲಿ, ಮೊದಲೇ ನಿಗದಿ ಪಡಿಸಿದ 3x4 ಜಾಗದಲ್ಲಿ ಕುಳಿತು ಕೆಲಸ ಮಾಡಿ, ಕೊನೆಯಲ್ಲಿ 3x4 ಗುಂಡಿಯಲ್ಲಿ ಮಲಗುವ ಮೊದಲು ದೊಡ್ಡ ಮೈದಾನಗಳಿಗೆ ಇಳಿದು ಆಟವಾಡೋಣವೇ? - ಕ್ರೀಡಾಮನೋಭಾವವನ್ನು ನಮ್ಮದಾಗಿಸಿಕೊಳ್ಳೋಣವೇ?

ನಿಮ್ಮವ,
ಹ.ನಾ.ಮಾಧವ ಭಟ್ 
ಪುಷ್ಯ-ಕೃಷ್ಣ-ತ್ರಯೋದಶಿ, ಶನಿವಾರ.
೦೨-೦೨-೨೦೧೯
ಬೆಂಗಳೂರು.


1 comment:

  1. Bahala khushi aaythu ninna blog odhi. Olleyadaagali.

    ReplyDelete