ದೇಶದ ಬಗೆಗಿನ ಬಧ್ಧತೆ ಮರೆತ ಎಡಬಿಡಂಗಿಗಳಿಗೆ ಏನೆನ್ನಬೇಕು?
ಕಳೆದ ೧೫ ದಿನಗಳಿಂದ ಮನಸ್ಸು ಬಹಳ ಘಾಸಿಗೊಂಡಿದೆ. ಫೆ.೧೪ ಭಾರತದ ಮಟ್ಟಿಗೆ ಕರಾಳ ದಿನ.
ನಮ್ಮ ದೇಶದ ೪೪ ಸೈನಿಕರನ್ನು ದುಷ್ಟಶಕ್ತಿಗಳು ಹತ್ಯೆಗೈದಿದ್ದು ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಭಯೋತ್ಪಾದನೆ - ಅದು ಕೇವಲ ಭಾರತಕ್ಕಲ್ಲ- ಮಾನವ ಜಗತ್ತಿಗೆ ಅಂಟಿದಶಾಪ. ೨೨ ವರ್ಷದ ಯುವಕನೊಬ್ಬ ಸ್ಫೋಟಕಗಳನ್ನು ಬಳಸಿ ೪೪ ಜನರನ್ನು ಹತ್ಯೆಗಯ್ಯುತ್ತಾನೆಂದರೆ ಆ ವಿಕೃತ ಮನಸ್ಸು ಹಾಗೂ ಅದರ ಹಿಂದಿರುವ ಸಂಘಟನೆಗಳ ಕ್ರೌರ್ಯ ಎಂಥಾದ್ದಿರಬಹುದು? ಇಂತಹ ಶಕ್ತಿಗಳನ್ನು ನಿಶ್ಶಕ್ತಿಗೊಳಿಸುವುದು ಮಾನವ ಸಮಾಜಕ್ಕೆ ಅನಿವಾರ್ಯ.
![]() |
| ಫುಲ್ವಾಮಾದಲ್ಲಿ ನೆಡೆದ ಭೀಕರ ಸ್ಫೋಟ |
ಸರಣಿಯನ್ನೊಮ್ಮೆ ನೆನಪಿಸಿಕೊಳ್ಳೋಣ: ಫೆ. ೧೪ ಫುಲ್ವಾಮಾದಲ್ಲಿ ಭಯೋತ್ಪಾದಕನ ದಾಳಿ, ಅದಾದ ನಂತರ ಪಾಕಿಸ್ತಾನದ ಮೇಲೆ ನಿಯಂತ್ರಣ ಹೇರಲು ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳು, ನಂತರ ಭಾರತೀಯ ವಾಯುಸೇನೆಯಿಂದ ವಿಷ ಜಂತುಗಳ ಹುತ್ತಕ್ಕೆ ಬಾಂಬ್ ದಾಳಿ. ಇದರಿಂದ ಸಿಟ್ಟುಗೊಂಡ ಪಾಕ್ನಿಂದ ಭಾರತದ ಮೇಲೆ ದಾಳಿಯ ಯತ್ನ, ಭಾರತದಿಂದ ಅದನ್ನು ಹಿಮ್ಮೆಟ್ಟಿಸಲು ಪ್ರತಿ ದಾಳಿ. ಈ ಹಂತದಲ್ಲಿ ಭಾರತದ ವಾಯುಸೇನಾಧಿಕಾರಿಯನ್ನು ಪಾಕಿಸ್ತಾನ ಸೇನೆ ಸೆರೆಹಿಡಿಯುವುದು ಮತ್ತು ಕೊನೆಯಲ್ಲಿ ಅವರನ್ನು ಜಿನೇವಾ ಒಪ್ಪಂದದಂತೆ ಭಾರತಕ್ಕೆ ಪುನಃ ಕಳುಹಿಸಿಕೊಡುವುದು - ಇಷ್ಟೆಲ್ಲಾ ಘಟನೆಗಳು ಈ ೧೫ ದಿನಗಳಲ್ಲಿ ಘಟಿಸಿದವು.
![]() |
| ಪಾಕಿಸ್ತಾನ ಬಂಧಿಸಿದ್ದ ಭಾರತೀಯ ವಾಯುಸೇನಾಧಿಕಾರಿ - ಅಭಿನಂದನ್ ವರ್ತಮಾನ್ |
ನಮ್ಮ ದೇಶಿಗರು ಇಂತಹ ಸನ್ನಿವೇಶಗಳಿಗೆ ಸ್ಪಂದಿಸುವಷ್ಟು
ಬೆಳೆದಿದ್ದಾರೆ. ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ವಾಟ್ಸಾಪ್, ಟ್ವಿಟರ್ ಇತ್ಯಾದಿಗಳು ಈ ಸ್ಪಂದನೆಗಳಿಗೆ ಪರಿಣಾಮಕಾರಿಯಾದ ಮಾಧ್ಯಮಗಳಾಗಿವೆ. ಅನೇಕರು ಭಯೋತ್ಪಾದನೆಯನ್ನು ಕಿತ್ತೊಗೆಯಬೇಕೆಂದೂ, ಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂದೂ ಅಭಿಪ್ರಾಯಪಟ್ಟರೆ, ಇನ್ನೂ ಅನೇಕರು ಬಂಧಿಯಾಗಿರುವ ಭಾರತೀಯ ಯೋಧ ಸುರಕ್ಷಿತವಾಗಿ ಹಿಂತಿರುಗಳೆಂದೂ ಹಾರೈಸಿದ್ದಾರೆ. ಅತ್ತ ಪಾಕಿಸ್ತಾನದ ಟ್ವೀಟಿಗರು ಭಾರತದ ಸೇನೆ
ಉಧ್ಧಟತನ ತೋರಿದೆ ಎಂದು ಅವಲತ್ತುಕೊಂಡಿದ್ದಾರೆ. ಹಾಗೆಯೇ ಕೆಲವರು ಭಾರತೀಯ ಯೋಧನನ್ನು ಗೌರವಯುತವಾಗಿ ನೆಡೆಸಿಕೊಂಡು ಹಿಂದಿರುಗಿಸಬೇಕೆಂದೂ, ಇನ್ನೂ ಕೆಲವರು ಹಿಂದಿರುಗಿಸಬಾರದೆಂದೂ ಪಾಕ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಇನ್ನು ಜಿನೇವಾ ಒಪ್ಪಂದದಂತೆ ನಮ್ಮ ಯೋಧನನ್ನುಹಿಂದಿರುಗಿಸಿದ ಮೇಲೆ ಭಾರತೀಯರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಅನೇಕ ರೀತಿಯ ಅಭಿಪ್ರಾಯಗಳಿಗೆ ಈ ಸಾಮಾಜಿಕ ಮಾಧ್ಯಮಗಳು ಸಾಕ್ಷಿಯಾದವು.
ನಮ್ಮ ದೇಶದ ಮೇಲೆ ಹೊರಗಿನವರ ಆಕ್ರಮಣ ಒಂದುಕಡೆಯಾದರೆ, ಒಳಗಿನವರ ಅತಿರೇಕಗಳು ನಮ್ಮನ್ನು ಇನ್ನೂ ಚಿಂತೆಗೀಡುಮಾಡಿದೆ. ಈ ಒಟ್ಟಾರೆ ಸನ್ನಿವೇಶ ಅನೇಕ ವ್ಯಕ್ತಿಗಳ, ರಾಜಕಾರಣಿಗಳ, ರಾಜಕೀಯ ಪಕ್ಷಗಳ, ಸಾಮಾಜಿಕ ಕಾರ್ಯಕರ್ತರೆನಿಸಿಕೊಂಡವರ, ಸಾಹಿತಿಗಳ, ಪತ್ರಕರ್ತರ ಹೀಗೆ ಅನೇಕರ "ರಾಷ್ಟ್ರೀಯ ಬಧ್ಧತೆ"ಯನ್ನು ತೋರಿಸಿಕೊಟ್ಟಿದೆ. ಇದು ಇವರುಗಳ ಬಣ್ಣವನ್ನು ಬಯಲು ಮಾಡಿ ಇವರನ್ನು ಬೆತ್ತಲು ಮಾಡಿದೆ. ಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ಇವರುಗಳು
ತಾವೇನು ಮಾಡುತ್ತಿದ್ದೇವೆ ಎಂಬುದನ್ನೇ ಮರೆತಂತಿದೆ. ಇದು ಕೇವಲ ಚುನಾವಣಾ ತಂತ್ರವೆಂದು ಕೆಲವು ರಾಜಕೀಯ ಪಕ್ಷಗಳು, ರಾಜಕಾರಣಿಗಳು, ಪತ್ರಕರ್ತರು ಭಯೋತ್ಪಾದನೆಯ ವಿರುಧ್ಧ ನೆಡೆದ ದಾಳಿಯ ಮೇಲೆ ತಣ್ಣೀರೆರೆಚಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ದಾಳಿಯ ಕುರಿತಾದ ಸಾಕ್ಷ್ಯಗಳನ್ನು ಬಹಿರಂಗಪಡಿಸಬೇಕೆಂದು ತಮ್ಮ ಬೇಜವಾಬ್ದಾರಿಯುತವಾಗಿ ಒತ್ತಾಯಿಸಿದ್ದಾರೆ. ಇತ್ತ ಸುದ್ದಿ ಮಾಧ್ಯಮಗಳು ವೀರ ಯೋಧನ ವ್ಯಯಕ್ತಿಕ ಮಾಹಿತಿಯನ್ನು ಫೋಟೋ ಸಹಿತ ಬಟಾ ಬಯಲು ಮಾಡಿರುವುದು - ಪಾಕಿಸ್ತಾನದವರೂ ಕೂಡಾ ನಮ್ಮತ್ತ ನೋಡಿ ನಗುವಂತೆ ಮಾಡಿದೆ.
ಹಾಗೆ ನೋಡಿದರೆ ಪಾಕಿಸ್ತಾನಕ್ಕೆ ನಮ್ಮ ಯೋಧನನ್ನು ಬಿಡುಗಡೆಗೊಳಿಸುವ ಹೊರತು ಬೇರೆ ಆಯ್ಕೆಗಳೇ ಇರಲಿಲ್ಲ. ಹಾಗಾಗಿ ಆ ದೇಶದ ಈ ನೆಡೆಯನ್ನು ನಾವು ಶಾಂತಿ ಸ್ಥಾಪನೆಯ ಬೀಜವೆಂದೇನೂ ಪರಿಗಣಿಸಬೇಕಿಲ್ಲ. ಇದರ ಪ್ರಾಥಮಿಕ ಅರಿವೂ ಇಲ್ಲದೇ, ಮೋದಿಯವರನ್ನು ವಿರೋಧಿಸುವ ಸಲುವಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನನ್ನ ಹೊಗಳಿರುವುದು, ಆತನ ನೆಡೆಯನ್ನು ಶಾಂತಿಮಾರ್ಗವೆಂದು ನಮ್ಮ ಕೆಲವು ಬುದ್ದಿಜೀವಿ(??)ಗಳು, ಪತ್ರಕರ್ತರು ಹೇಳಿರುವುದು ನಮ್ಮ ದೇಶದ ದುರ್ಧೈವವೇ ಸರಿ. ನಮ್ಮ ಕೆಲವು ಎಡ ಬಿಡಂಗಿ ರಾಜಕಾರಣಿಗಳು ಇದೇ ಸನ್ನಿವೇಶವನ್ನು ರಾಜಕೀಯದ ತಕ್ಕಡಿಯಲ್ಲಿ ಹಾಕಿ ತೂಗಿರುವುದು ಅತ್ಯಂತ ಕೆಳಮಟ್ಟದ ಬೆಳವಣಿಗೆಯಾಗಿದೆ. ೩೦೦ ಲೋಕಸಭಾ ಸ್ಥಾನಗಳಿಗಾಗಿ ಈ ದಾಳಿ ನೆಡೆದಿದೆ ಎಂಬ ಪ್ರಜ್ಞಾ ರಹಿತ ದೆಹಲಿ ಮುಖ್ಯಮಂತ್ರಿಯ ಹೇಳಿಕೆ ಪಾಕ್ ಸಂಸತ್ತಿನಲ್ಲೂ ಚರ್ಚೆಯ ವಿಷಯವಾಗುತ್ತದೆಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೇನಿರಲು ಸಾಧ್ಯ?
ಇಡೀ ಪ್ರಕರಣದಲ್ಲಿ ಭಾರತ ರಾಜತಾಂತ್ರಿಕವಾಗಿ ಗೆದ್ದಿದೆ. ಅಂತರಾಷ್ಟ್ರೀಯ ಗಡಿರೇಖೆಯನ್ನು ದಾಟಿ ದಾಳಿ ಮಾಡಿರುವುದು ನಮ್ಮ ಭಾರತ ಸರ್ಕಾರದ ಗಟ್ಟಿ ನಿರ್ಧಾರವೇ ಸರಿ. ಈ ನಿರ್ಧಾರಕ್ಕಾಗಿ ನಾನು ಮೋದಿಯವರನ್ನು ಬೆಂಬಲಿಸುತ್ತೇನೆ. ಒಟ್ಟಾರೆ ಈ ಘಟನಾವಳಿಗಳ ಧನಾತ್ಮಕ ಪರಿಣಾಮವನ್ನು ಮೋದಿಯವರಿಗೆ ಕೊಡಬಾರದೆಂಬುದೇ ಮೋದಿ ವಿರೋಧಿಗಳ ಏಕಮೇವ ಧ್ಯೇಯವಾಗಿದೆ. ಆದರೆ ಮನೆಯೇ ಹೊತ್ತಿ ಉರಿಯುತ್ತಿರುವಾಗ ಮನೆಯ ಯಜಮಾನನಿಗೆ ಹೆಗಲು ಕೊಟ್ಟು ನಿಲ್ಲುವುದು ನಮ್ಮ ಜವಾಬ್ದಾರಿ. ಆಢಳಿತ ಪಕ್ಷವನ್ನು ವಿರೋಧಿಸುವುದು, ಮೋದಿಯವರನ್ನು ಹೊಗಳುವುದು - ತೆಗಳುವುದು, ಪುಷ್ಟೀಕರಿಸುವುದು - ವಿರೋಧಿಸುವುದು ಅವರವರ ಆಯ್ಕೆ. ಆದರೆ ಇಂತಹ ಸನ್ನಿವೇಶಗಳನ್ನು ರಾಜಕೀಯದ ವಕ್ರದೃಷ್ಟಿಯಿಂದ ನೋಡಿ, "ಬಧ್ಧತೆ"ಯನ್ನು ಮರೆಯುವುದು - ರಾಷ್ಟ್ರೀಯ ಭದ್ರತೆಗೆ ಮಾರಕವೇ ಸರಿ.
ಕೊನೆಯ ಹನಿ: ದೇಶದ ಬಗ್ಗೆ ಬಧ್ಧತೆಯೇ ಇಲ್ಲದ ಈ ಜನರು ಮೋದಿಯವರನ್ನು ವಿರೋಧಿಸುವ ರೀತಿ ಮತ್ತು ತಾರಾತುರಿಯನ್ನು ನೋಡಿದರೆ, ಮೋದಿ ಇಂತಹ ಎಡ ಬಿಡಂಗಿಗಳಿಗೆ ತೊಡಕಾಗುವ ಏನೋ ಕೆಲಸ ಮಾಡುತ್ತಿದ್ದಾರೆಂದೆನಿಸುತ್ತದೆ. ಮೋದಿಯೇ ಮುಂದುವರಿದರೆ ಈ ನಿರ್ಲಜ್ಜರುಗಳಿಗೆ ದಿನನಿತ್ಯದ ಗಂಜಿಗೇ ಗತಿ ಇಲ್ಲದ ಸ್ಥಿತಿ ಬರಬಹುದೆನಿಸುತ್ತದೆ. ಈ ಒಂದೇ ಒಂದು ಕಾರಣಕ್ಕಾಗಿ ನಾನು ಮೋದಿಯವರ ಕೈ ಬಲಪಡಿಸುವ ಎಲ್ಲ ಪ್ರಯತ್ನ ಮಾಡುತ್ತೇನೆ.
ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಮಾಘ-ಕೃಷ್ಣ-ತ್ರಯೋದಶೀ,
ಸೋಮವಾರ - ಮಹಾ ಶಿವರಾತ್ರಿ.
೦೪-೦೩-೨೦೧೯, ಬೆಂಗಳೂರು.



No comments:
Post a Comment