ಬರೆಯುವುದೆಂದರೆ ಇಷ್ಟ - ಆದರೂ ಬಲು ಕಷ್ಟ !
ಬಹಳ ದಿನಗಳ ನಂತರ ಏನಾದರೂ ಬರೆಯಬೇಕೆನಿಸಿದ್ದರಿಂದ ಪೇಪರ್ - ಪೆನ್ ತೆಗೆದುಕೊಂಡೆ. ಆದರೆ ಭಾವನೆಗಳನ್ನು ಬರಹದ ರೂಪಕ್ಕೆ ಇಳಿಸುವುದು ಯಾಕೋ ಕಷ್ಟವೆನಿಸಿದಂತಾಯಿತು. ಇದು ಬಹಳ ದಿನಗಳ ಅಂತರದಿಂದಾಗಿಯೂ ಇರಬಹುದು. ಹಾಗಾಗಿ ಈ ಬರಹ ಬರಗಾಲದಲ್ಲಿ 'ಬರಹ' ದ ಬಗ್ಗೆಯೇ ಬರೆಯೋಣವೆನಿಸಿ ಮುಂದುವರಿಸುತ್ತಿದ್ದೇನೆ.
ಶೈಕ್ಷಣಿಕ ಉದ್ದೇಶದ ಹೊರತಾಗಿ ನಾನು ಬರೆಯಲು ಆರಂಭಿಸಿದ್ದು ನನ್ನ ವಿದ್ಯಾಸ್ಥಾನವಾದ ಪ್ರಬೋಧಿನಿ ಗುರುಕುಲದಲ್ಲಿ. ಗುರುಕುಲದಲ್ಲಿ ಅಪ್ಪ-ಅಮ್ಮನೊಂದಿಗೆ ಮೊಬೈಲ್/ ದೂರವಾಣಿಯಲ್ಲಿ ಮಾತನಾಡಲು ಅವಕಾಶವಿರಲಿಲ್ಲ. ಆ ದಿನಗಳಲ್ಲಿ ಪೋಸ್ಟ್ ಕಾರ್ಡ್ ಅಥವಾ ಇನ್ಲ್ಯಾನ್ಡ್ ಲೆಟರ್ ಬಳಸಿ ಪಾತ್ರಮುಖೇನವೇ ಪೋಷಕರನ್ನು ಸಂಪರ್ಕಿಸಬೇಕಿತ್ತು. 'ತೀರ್ಥರೂಪರಾದ ತಂದೆ-ತಾಯಿಯವರಿಗೆ ನನ್ನ ನಮಸ್ಕಾರಗಳು' ಎಂದು ಪತ್ರ ಆರಂಭಿಸುತ್ತಿದ್ದೆ, 'ಮತ್ತೆಲ್ಲಾ ಕ್ಷೇಮ' ಎಂದು ಮುಗಿಸುತ್ತಿದ್ದೆ. ೫೦ ಪೈಸೆಯ ಪೋಸ್ಟ್ ಕಾರ್ಡ್ ನಲ್ಲಿ ಅಪ್ಪ ಅಮ್ಮನಿಗೆ ಹೇಳಬೇಕಾದ್ದನ್ನು ಸಂಕ್ಷಿಪ್ತವಾಗಿ ಹೇಳುವುದೇ ಬಹುದೊಡ್ಡ ಶಿಕ್ಷಣ. ಅನೇಕರು ಉಳಿದವರಿಗೆ ಬರೆದ ಕೇವಲ ಪತ್ರಗಳೇ ಪುಸ್ತಕಗಳಾಗಿ ಸಂಪನ್ನವಾಗಿವೆ. ಪತ್ರವೆನ್ನುವುದು ಜರಡಿ ಇಳಿಸಿದ ಹಣ್ಣಿನ ರಸದಂತೆ...!
ಭಾವನೆಗಳನ್ನೂ, ಚಿಂತನೆಗಳನ್ನೂ ಮಾತಿನ ರೂಪದಲ್ಲಿ ವ್ಯಕ್ತ ಪಡಿಸುವುದಕ್ಕಿಂತ ಬರಹದ ರೂಪದಲ್ಲಿ ವ್ಯಕ್ತ ಪಡಿಸುವುದು ಏಕೆ ಕಷ್ಟ? ಬಹುಶ: ಬರಹವೆನ್ನುವುದು ಮಾತಿಗಿಂತಲೂ ಔಪಚಾರಿಕ ಮಾಧ್ಯಮವಾಗಿರುವುದರಿಂದ ಕಷ್ಟವೆನಿಸಬಹುದೇನೋ? ನಮ್ಮ ಭಾವನೆಗಳೋ ಅಥವಾ ಚಿಂತನೆಗಳೋ ಕೇವಲ ಮಾತಿಗಿಂತಲೂ ಬರಹದ ರೂಪದಲ್ಲಿ ವ್ಯಕ್ತವಾದಾಗ ಅದು ತನ್ನ ಅಳಿಸಲಾಗದ ಛಾಪನ್ನು ಮೂಡಿಸುತ್ತದೆ - ಮತ್ತು ಇದೇ ಕಾರಣದಿಂದಲೋ ಏನೋ ಜನ ಬರಹಕ್ಕೆ ಹಿಂಜರಿಯುತ್ತಾರೆ. ಮಾತಿನಲ್ಲೇ ಮನೆ ಕಟ್ಟುತ್ತಾರೆ!
ಮಾತು ಕೇಳುಗರನ್ನು ಆಕರ್ಷಿಸುತ್ತದೆ, ದೃಶ್ಯ ನೋಡುಗರನ್ನು ಸೆಳೆಯುತ್ತದೆ, ಆದರೆ ಬರಹ ಓದುಗರನ್ನು ಉದ್ದೇಶಿಸಿರುತ್ತದೆ. ಓದುವುದು ಕೇಳುವುದಕ್ಕಿಂತ ಕಷ್ಟವಾದ್ದರಿಂದ ಅದರ ಮೂಲವಾದ ಬರಹ ಮಾತಿಗಿಂತಲೂ ಸ್ವಲ್ಪ ಕಷ್ಟ..! ಭಾವನೆ ಮಾತಿನ ರೂಪದಲ್ಲಿ ವ್ಯಕ್ತವಾದಾಗ ಧ್ವನಿಯ ಏರಿಳಿತ, ಅಂಗಾಂಗಗಳ ಚಲನೆ, ದೇಹದ ಭಾವ, ಕಣ್ಣಿನ ನೋಟ ಹೀಗೆ ಎಲ್ಲವೂ ಸಂವಹನಕ್ಕೆ ಸಹಕರಿಸುತ್ತವೆ, ಅದನ್ನು ಸುಲಭವಾಗಿಸುತ್ತದೆ. ಒಂದು ಕಣ್ಣೀರು ದುಃಖವನ್ನೂ, ತುಟಿಯ ಮೇಲಿನ ಒಂದು ನಗು ಸಂತೋಷವನ್ನೂ ಸೂಚಿಸುತ್ತದೆ. ಅದೇ ದುಃಖವನ್ನೋ, ಸಂತೋಷವನ್ನೋ ವ್ಯಕ್ತಪಡಿಸಲು ಬರಹಕ್ಕೆ ನಾಲ್ಕಾರು ವಾಕ್ಯಗಳೇ ಬೇಕಾಗಬಹುದು. ಏಕೆಂದರೆ ಬರಹ ಎನ್ನುವುದು ಸ್ವತಂತ್ರ ಸಂವಹನಾ ಮಾಧ್ಯಮ. ಇಲ್ಲಿ ಅಕ್ಷರಗಳೇ ಮಾತನಾಡಬೇಕಷ್ಟೆ. ಬರೆದದ್ದನ್ನು ಓದುಗ ಹೇಗೆ 'ಓದುತ್ತಾನೋ' ಅಲ್ಲ ಹೇಗೆ 'ಸ್ವೀಕರಿಸುತ್ತಾನೋ' ಹಾಗೆ ಅದು ಅರ್ಥವಾಗುತ್ತದೆ. ಬರಹಗಾರನ ಬರಹದ 'ದುಃಖ', ಓದುಗನ ಕೈಯಲ್ಲಿ 'ಸಂತೋಷ' ವಾಗಿ ಬದಲಾದರೆ ಅದು ವಿಪರ್ಯಾಸವೇ ಸರಿ. ಇದು ಬರಹಗಾರನಿಗೆ ಇರುವ ಸವಾಲಷ್ಟೇ.
ಬರಹ ಬಹಳ ಶಕ್ತಿಶಾಲಿಯಾದ ಸಂವಹನಾ ಮಾಧ್ಯಮ. ಚಿಂತನೆಗಳನ್ನು ಕಾಗದದ ಮೇಲೆ ವ್ಯವಸ್ಥಿತವಾಗಿ ಬಟ್ಟಿ ಇಳಿಸುವ ಪ್ರಕ್ರಿಯೆಯೇ ಬರಹ. ಆಗಲೇ ಹೇಳಿದಂತೆ ಬರಹವೊಂದು ಔಪಚಾರಿಕ ಮಾಧ್ಯಮವಾಗಿರುವುದರಿಂದ ಇಲ್ಲಿ ವ್ಯಕ್ತವಾಗುವ ಭಾವನೆಗಳೂ, ಚಿಂತನೆಗಳೂ ವ್ಯವಸ್ಥಿತ ವಿಧಾನವನ್ನು ಅಪೇಕ್ಷಿಸುತ್ತವೆ. ಭಾಷೆಯ ತಕ್ಕಮಟ್ಟಿನ ಪ್ರೌಢಿಮೆಯೂ (ಮಾತಿಗಿಂತ) ಅಗತ್ಯವೆನಿಸುತ್ತದೆ. ಈ ಕಾರಣದಿಂದಾಗಿ ಬರಹಗಾರ ಸ್ವಲ್ಪಮಟ್ಟಿನ ಶ್ರಮವಹಿಸಬೇಕಾಗುತ್ತದೆ. ಇಂದು ನಾವಾಡಿದ ಮಾತು ಕೆಲವು ಕಾಲಾನಂತರ ಮರೆತು ಹೋಗಬಹುದು - ಇದು ಮಾತಿಗಿರುವ ಶಾಪ ಮತ್ತು ವರವೂ ಆಗಿದೆ. ಆದರೆ ಒಮ್ಮೆ ಅಚ್ಚಾದ ಬರಹ ಎಂದಿಗೂ ಅಚ್ಚಳಿಯದಂತೆ ಇತಿಹಾಸ ಸೇರುತ್ತದೆ. ಸಾರ್ವಕಾಲಿಕವಾಗುತ್ತದೆ. ಅಮರವಾಗುತ್ತದೆ. ಅಳಿದು ಹೋದ ರಾಜ-ಮಹಾರಾಜರುಗಳ ಬಗ್ಗೆ, ಕಳೆದು ಹೋದ ಸಾಮ್ರಾಜ್ಯಗಳ ಬಗ್ಗೆ ನಮಗೆ ತಿಳಿದಿರುವುದು ಅವರು ಬರೆಸಿದ ಎಂದೂ ಅಳಿಸದ ಶಾಸನ ಬರಹಗಳಿಂದಲೇ ಅಲ್ಲವೇ? ಹಾಗೆಯೇ ಅನೇಕರು ತಮ್ಮ ತರಹೇವಾರಿ ಬರಹಗಳಿಂದಲೇ ಇಂದಿಗೂ ಜೀವಂತವಾಗಿರುವರಲ್ಲವೇ?
ಚೌಕಟ್ಟಿಲ್ಲದ ಮಾತಿನ ಅವತರಿಣಿಕೆಗೆ ಹರಟೆ ಅನ್ನುತ್ತೇವೆ. ಕಾಲ ಹರಣವೇ ಮಾತಿನ ಉದ್ದೇಶವಾಗಿದ್ದರೆ ಅದು ಹಾಳು-ಹರಟೆಯಾಗುತ್ತದೆ. ಈ ಸಾಧ್ಯತೆ ಬರವಣಿಗೆಯಲ್ಲಿ ಸಾಧುವೂ ಅಲ್ಲ, ಸಾಧ್ಯವೂ ಇಲ್ಲ. ಬರಹದಲ್ಲಿ ಮುಂದಿನ ಸಾಲು ಹಿಂದಿನ ಸಾಲನ್ನು ಅನುಸರಿಸಲೇ ಬೇಕು. ಇಲ್ಲವಾದರೆ ಅದನ್ನು ನಾವು ಅಳಿಸಿ ಸರಿಪಡಿಸಬೇಕಾಗುತ್ತದೆ. ಹಾಳು-ಹರಟೆಯಂತಲ್ಲ ಬರಹ. ಬರವಣಿಗೆ ನಮ್ಮನ್ನು ಅಧ್ಯಯನಶೀಲರನ್ನಾಗಿಸುತ್ತದೆ. ಓದುಗರನ್ನಾಗಿಸುತ್ತದೆ. ಒಳ್ಳೆಯ ಓದುಗನಷ್ಟೇ ಅದ್ಭುತ ಬರಹಗಾರನಾಗಬಲ್ಲ. ಆಳಾಗಿ ಬಲ್ಲವನು ಅರಸನಾಗಿ ಬಲ್ಲನಂತೆ, ಓದುಗನಾಗಿ ಬಲ್ಲವನು ಬರಹಗಾರನಾಗಬಲ್ಲ.
ಇಂದು ನಾವು ಬರೆಯುವುದೇ ಇಲ್ಲ. ಕಾಲೇಜಿನಲ್ಲಿ ಹಾಕಿದ ಪೆನ್ನಿನ ಕ್ಯಾಪ್ ಅನ್ನು ತೆಗೆಯುವುದೇ ಇಲ್ಲ..! ಅಲ್ಲಿಗೆ ಅದರ ಋಣ ತೀರಿದಂತೆ. ನಮ್ಮಲ್ಲಿ ಅನೇಕರಿಗೆ ಪೆನ್ ಅನಗತ್ಯ ಅನುಪಯುಕ್ತ ಅಪ್ರಯೋಜಕ ವಸ್ತುವಾಗಿದೆ. ಬ್ಯಾಂಕಿನಲ್ಲಿ ಸಹಿ ಹಾಕಲು ಪೆನ್ ಬೇಕಾದಾಗ ಪಕ್ಕದವರ ಬಳಿ ತೆಗೆದುಕೊಂಡರಾಯಿತು..!
ಮೊಬೈಲ್ ಮತ್ತು ಕಂಪ್ಯೂಟರ್ ಗಳು ಬರಹದ ಅವಶ್ಯಕತೆಗಳನ್ನು ಕಡಿಮೆ ಮಾಡಿದಂತೆ ಅನ್ನಿಸುತ್ತದೆ. ಆದರೆ ಅದು ವ್ಯವಹಾರದ ಅವಶ್ಯಕತೆಗಷ್ಟೇ ಸೀಮಿತವಾಗಬೇಕಲ್ಲವೇ? ಬರಹ ಅಷ್ಟು ನಿರುಪಯುಕ್ತವಾಯಿತೇ? ಸಂವಹನಾ ಮಾಧ್ಯಮವಾಗಿ ಮೊಬೈಲ್ / ದೂರವಾಣಿಗಳು ಹಳೆಯ ಪತ್ರಗಳಿಗಿಂತ ನೂರು ಪಟ್ಟು ವಾಸಿ. ಕೈ ಬರಹದ 'ಅರ್ಜಿ' ಗಿಂತ 'ಆನ್ಲೈನ್ ಅಪ್ಲಿಕೇಶನ್' ಸಾವಿರ ಪಟ್ಟು ವಾಸಿ. ಆದರೆ ಬರಹದ ಮಿತಿ ಅಷ್ಟೇ ಅಲ್ಲವಲ್ಲ. ಸಂವಹನೆಯ ದೃಷ್ಟಿಯಿಂದ ಅನೇಕ ಮಾಧ್ಯಮಗಳು ಇಂದು ಲಭ್ಯವಿದ್ದರೂ ಬರಹದ ಮಹತ್ವವನ್ನು ತಗ್ಗಿಸಲಾರವು. ವ್ಯವಹಾರಕ್ಕೆ ಹೊರತಾದ ಬರವಣಿಗೆಯನ್ನು ರೂಢಿಸಿಕೊಳ್ಳಲೇ ಬೇಕೆನ್ನುವವನು ನಾನು. ಅದು ನಮ್ಮ ಚಿಂತನಾ ಸರಣಿಯನ್ನು ಸರಳೀಕರಿಸುತ್ತದೆ. ಸಹಿ ಹಾಕುವುದು, ಅರ್ಜಿಗಳನ್ನು ತುಂಬುವುದನ್ನು ಹೊರತುಪಡಿಸಿ ವರ್ಷಕ್ಕೆ ಒಂದು ಪೆನ್ನನ್ನಾದರೂ ಖಾಲಿ ಮಾಡಬೇಕು. ನಮ್ಮ ಚಿಂತನೆಗಳನ್ನು ಬರಹರೂಪಕ್ಕೆ ಇಳಿಸಿ ವಿಮರ್ಶೆಗೊಳಪಡಿಸಿಕೊಳ್ಳಬೇಕು..!!
ಕೊನೆಯ ಹನಿ: ಬರೆಯಬೇಕೆಂಬ ಹಂಬಲವೇ ನಮ್ಮನ್ನು ಬರಹಗಾರರನ್ನಾಗಿ ಮಾಡಬಲ್ಲದು. ಬರೆಯೋಣ, ಮತ್ತೆ ಬೆಳೆಯೋಣ.
ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಭಾದ್ರಪದ-ಕೃಷ್ಣ-ದ್ವಿತೀಯಾ.
೦೧-ಅಕ್ಟೋಬರ್-೨೦೨೩, ಭಾನುವಾರ.
ಬೆಂಗಳೂರು.