Sunday 1 October 2023

ಬರೆಯುವುದೆಂದರೆ ಇಷ್ಟ - ಆದರೂ ಬಲು ಕಷ್ಟ !!

 ಬರೆಯುವುದೆಂದರೆ ಇಷ್ಟ - ಆದರೂ ಬಲು ಕಷ್ಟ !

ಬಹಳ ದಿನಗಳ ನಂತರ ಏನಾದರೂ ಬರೆಯಬೇಕೆನಿಸಿದ್ದರಿಂದ ಪೇಪರ್ - ಪೆನ್ ತೆಗೆದುಕೊಂಡೆ. ಆದರೆ ಭಾವನೆಗಳನ್ನು ಬರಹದ ರೂಪಕ್ಕೆ ಇಳಿಸುವುದು ಯಾಕೋ ಕಷ್ಟವೆನಿಸಿದಂತಾಯಿತು. ಇದು ಬಹಳ ದಿನಗಳ ಅಂತರದಿಂದಾಗಿಯೂ ಇರಬಹುದು. ಹಾಗಾಗಿ ಈ ಬರಹ ಬರಗಾಲದಲ್ಲಿ 'ಬರಹ' ದ ಬಗ್ಗೆಯೇ ಬರೆಯೋಣವೆನಿಸಿ ಮುಂದುವರಿಸುತ್ತಿದ್ದೇನೆ.

ಶೈಕ್ಷಣಿಕ ಉದ್ದೇಶದ ಹೊರತಾಗಿ ನಾನು ಬರೆಯಲು ಆರಂಭಿಸಿದ್ದು ನನ್ನ ವಿದ್ಯಾಸ್ಥಾನವಾದ ಪ್ರಬೋಧಿನಿ ಗುರುಕುಲದಲ್ಲಿ. ಗುರುಕುಲದಲ್ಲಿ ಅಪ್ಪ-ಅಮ್ಮನೊಂದಿಗೆ ಮೊಬೈಲ್/ ದೂರವಾಣಿಯಲ್ಲಿ ಮಾತನಾಡಲು ಅವಕಾಶವಿರಲಿಲ್ಲ. ಆ ದಿನಗಳಲ್ಲಿ ಪೋಸ್ಟ್ ಕಾರ್ಡ್ ಅಥವಾ ಇನ್ಲ್ಯಾನ್ಡ್ ಲೆಟರ್ ಬಳಸಿ ಪಾತ್ರಮುಖೇನವೇ ಪೋಷಕರನ್ನು ಸಂಪರ್ಕಿಸಬೇಕಿತ್ತು. 'ತೀರ್ಥರೂಪರಾದ ತಂದೆ-ತಾಯಿಯವರಿಗೆ ನನ್ನ ನಮಸ್ಕಾರಗಳು' ಎಂದು ಪತ್ರ ಆರಂಭಿಸುತ್ತಿದ್ದೆ, 'ಮತ್ತೆಲ್ಲಾ ಕ್ಷೇಮ' ಎಂದು ಮುಗಿಸುತ್ತಿದ್ದೆ. ೫೦ ಪೈಸೆಯ ಪೋಸ್ಟ್ ಕಾರ್ಡ್ ನಲ್ಲಿ ಅಪ್ಪ ಅಮ್ಮನಿಗೆ ಹೇಳಬೇಕಾದ್ದನ್ನು ಸಂಕ್ಷಿಪ್ತವಾಗಿ ಹೇಳುವುದೇ ಬಹುದೊಡ್ಡ ಶಿಕ್ಷಣ. ಅನೇಕರು ಉಳಿದವರಿಗೆ ಬರೆದ ಕೇವಲ ಪತ್ರಗಳೇ ಪುಸ್ತಕಗಳಾಗಿ ಸಂಪನ್ನವಾಗಿವೆ. ಪತ್ರವೆನ್ನುವುದು ಜರಡಿ ಇಳಿಸಿದ ಹಣ್ಣಿನ ರಸದಂತೆ...!

ಭಾವನೆಗಳನ್ನೂ, ಚಿಂತನೆಗಳನ್ನೂ ಮಾತಿನ ರೂಪದಲ್ಲಿ ವ್ಯಕ್ತ ಪಡಿಸುವುದಕ್ಕಿಂತ ಬರಹದ ರೂಪದಲ್ಲಿ ವ್ಯಕ್ತ ಪಡಿಸುವುದು ಏಕೆ ಕಷ್ಟ? ಬಹುಶ: ಬರಹವೆನ್ನುವುದು ಮಾತಿಗಿಂತಲೂ ಔಪಚಾರಿಕ ಮಾಧ್ಯಮವಾಗಿರುವುದರಿಂದ ಕಷ್ಟವೆನಿಸಬಹುದೇನೋ? ನಮ್ಮ ಭಾವನೆಗಳೋ ಅಥವಾ ಚಿಂತನೆಗಳೋ ಕೇವಲ ಮಾತಿಗಿಂತಲೂ ಬರಹದ ರೂಪದಲ್ಲಿ ವ್ಯಕ್ತವಾದಾಗ ಅದು ತನ್ನ ಅಳಿಸಲಾಗದ ಛಾಪನ್ನು ಮೂಡಿಸುತ್ತದೆ - ಮತ್ತು ಇದೇ ಕಾರಣದಿಂದಲೋ ಏನೋ ಜನ ಬರಹಕ್ಕೆ ಹಿಂಜರಿಯುತ್ತಾರೆ. ಮಾತಿನಲ್ಲೇ ಮನೆ ಕಟ್ಟುತ್ತಾರೆ! 

ಮಾತು ಕೇಳುಗರನ್ನು ಆಕರ್ಷಿಸುತ್ತದೆ, ದೃಶ್ಯ ನೋಡುಗರನ್ನು ಸೆಳೆಯುತ್ತದೆ, ಆದರೆ ಬರಹ ಓದುಗರನ್ನು ಉದ್ದೇಶಿಸಿರುತ್ತದೆ. ಓದುವುದು ಕೇಳುವುದಕ್ಕಿಂತ ಕಷ್ಟವಾದ್ದರಿಂದ ಅದರ ಮೂಲವಾದ ಬರಹ ಮಾತಿಗಿಂತಲೂ ಸ್ವಲ್ಪ ಕಷ್ಟ..! ಭಾವನೆ ಮಾತಿನ ರೂಪದಲ್ಲಿ ವ್ಯಕ್ತವಾದಾಗ ಧ್ವನಿಯ ಏರಿಳಿತ, ಅಂಗಾಂಗಗಳ ಚಲನೆ, ದೇಹದ ಭಾವ, ಕಣ್ಣಿನ ನೋಟ ಹೀಗೆ ಎಲ್ಲವೂ ಸಂವಹನಕ್ಕೆ ಸಹಕರಿಸುತ್ತವೆ, ಅದನ್ನು ಸುಲಭವಾಗಿಸುತ್ತದೆ. ಒಂದು ಕಣ್ಣೀರು ದುಃಖವನ್ನೂ, ತುಟಿಯ ಮೇಲಿನ ಒಂದು ನಗು ಸಂತೋಷವನ್ನೂ ಸೂಚಿಸುತ್ತದೆ. ಅದೇ ದುಃಖವನ್ನೋ, ಸಂತೋಷವನ್ನೋ ವ್ಯಕ್ತಪಡಿಸಲು ಬರಹಕ್ಕೆ ನಾಲ್ಕಾರು ವಾಕ್ಯಗಳೇ ಬೇಕಾಗಬಹುದು. ಏಕೆಂದರೆ ಬರಹ ಎನ್ನುವುದು ಸ್ವತಂತ್ರ ಸಂವಹನಾ ಮಾಧ್ಯಮ. ಇಲ್ಲಿ ಅಕ್ಷರಗಳೇ ಮಾತನಾಡಬೇಕಷ್ಟೆ. ಬರೆದದ್ದನ್ನು ಓದುಗ ಹೇಗೆ 'ಓದುತ್ತಾನೋ' ಅಲ್ಲ ಹೇಗೆ 'ಸ್ವೀಕರಿಸುತ್ತಾನೋ' ಹಾಗೆ ಅದು ಅರ್ಥವಾಗುತ್ತದೆ. ಬರಹಗಾರನ ಬರಹದ 'ದುಃಖ', ಓದುಗನ ಕೈಯಲ್ಲಿ 'ಸಂತೋಷ' ವಾಗಿ ಬದಲಾದರೆ ಅದು ವಿಪರ್ಯಾಸವೇ ಸರಿ. ಇದು ಬರಹಗಾರನಿಗೆ ಇರುವ ಸವಾಲಷ್ಟೇ.

ಬರಹ ಬಹಳ ಶಕ್ತಿಶಾಲಿಯಾದ ಸಂವಹನಾ ಮಾಧ್ಯಮ. ಚಿಂತನೆಗಳನ್ನು ಕಾಗದದ ಮೇಲೆ ವ್ಯವಸ್ಥಿತವಾಗಿ ಬಟ್ಟಿ ಇಳಿಸುವ ಪ್ರಕ್ರಿಯೆಯೇ ಬರಹ. ಆಗಲೇ ಹೇಳಿದಂತೆ ಬರಹವೊಂದು ಔಪಚಾರಿಕ ಮಾಧ್ಯಮವಾಗಿರುವುದರಿಂದ ಇಲ್ಲಿ ವ್ಯಕ್ತವಾಗುವ ಭಾವನೆಗಳೂ, ಚಿಂತನೆಗಳೂ ವ್ಯವಸ್ಥಿತ ವಿಧಾನವನ್ನು ಅಪೇಕ್ಷಿಸುತ್ತವೆ. ಭಾಷೆಯ ತಕ್ಕಮಟ್ಟಿನ ಪ್ರೌಢಿಮೆಯೂ (ಮಾತಿಗಿಂತ) ಅಗತ್ಯವೆನಿಸುತ್ತದೆ. ಈ ಕಾರಣದಿಂದಾಗಿ ಬರಹಗಾರ ಸ್ವಲ್ಪಮಟ್ಟಿನ ಶ್ರಮವಹಿಸಬೇಕಾಗುತ್ತದೆ. ಇಂದು ನಾವಾಡಿದ ಮಾತು ಕೆಲವು ಕಾಲಾನಂತರ ಮರೆತು ಹೋಗಬಹುದು - ಇದು ಮಾತಿಗಿರುವ ಶಾಪ ಮತ್ತು ವರವೂ ಆಗಿದೆ. ಆದರೆ ಒಮ್ಮೆ ಅಚ್ಚಾದ ಬರಹ ಎಂದಿಗೂ ಅಚ್ಚಳಿಯದಂತೆ ಇತಿಹಾಸ ಸೇರುತ್ತದೆ. ಸಾರ್ವಕಾಲಿಕವಾಗುತ್ತದೆ. ಅಮರವಾಗುತ್ತದೆ. ಅಳಿದು ಹೋದ ರಾಜ-ಮಹಾರಾಜರುಗಳ ಬಗ್ಗೆ, ಕಳೆದು ಹೋದ ಸಾಮ್ರಾಜ್ಯಗಳ ಬಗ್ಗೆ ನಮಗೆ ತಿಳಿದಿರುವುದು ಅವರು ಬರೆಸಿದ ಎಂದೂ ಅಳಿಸದ ಶಾಸನ ಬರಹಗಳಿಂದಲೇ ಅಲ್ಲವೇ? ಹಾಗೆಯೇ ಅನೇಕರು ತಮ್ಮ ತರಹೇವಾರಿ ಬರಹಗಳಿಂದಲೇ ಇಂದಿಗೂ ಜೀವಂತವಾಗಿರುವರಲ್ಲವೇ?

ಚೌಕಟ್ಟಿಲ್ಲದ ಮಾತಿನ ಅವತರಿಣಿಕೆಗೆ ಹರಟೆ ಅನ್ನುತ್ತೇವೆ. ಕಾಲ ಹರಣವೇ ಮಾತಿನ ಉದ್ದೇಶವಾಗಿದ್ದರೆ ಅದು ಹಾಳು-ಹರಟೆಯಾಗುತ್ತದೆ. ಈ ಸಾಧ್ಯತೆ ಬರವಣಿಗೆಯಲ್ಲಿ ಸಾಧುವೂ ಅಲ್ಲ, ಸಾಧ್ಯವೂ ಇಲ್ಲ. ಬರಹದಲ್ಲಿ ಮುಂದಿನ ಸಾಲು ಹಿಂದಿನ ಸಾಲನ್ನು ಅನುಸರಿಸಲೇ ಬೇಕು. ಇಲ್ಲವಾದರೆ ಅದನ್ನು ನಾವು ಅಳಿಸಿ ಸರಿಪಡಿಸಬೇಕಾಗುತ್ತದೆ. ಹಾಳು-ಹರಟೆಯಂತಲ್ಲ ಬರಹ. ಬರವಣಿಗೆ ನಮ್ಮನ್ನು ಅಧ್ಯಯನಶೀಲರನ್ನಾಗಿಸುತ್ತದೆ. ಓದುಗರನ್ನಾಗಿಸುತ್ತದೆ. ಒಳ್ಳೆಯ ಓದುಗನಷ್ಟೇ ಅದ್ಭುತ ಬರಹಗಾರನಾಗಬಲ್ಲ. ಆಳಾಗಿ ಬಲ್ಲವನು ಅರಸನಾಗಿ ಬಲ್ಲನಂತೆ, ಓದುಗನಾಗಿ ಬಲ್ಲವನು ಬರಹಗಾರನಾಗಬಲ್ಲ. 

ಇಂದು ನಾವು ಬರೆಯುವುದೇ ಇಲ್ಲ. ಕಾಲೇಜಿನಲ್ಲಿ ಹಾಕಿದ ಪೆನ್ನಿನ ಕ್ಯಾಪ್ ಅನ್ನು ತೆಗೆಯುವುದೇ ಇಲ್ಲ..! ಅಲ್ಲಿಗೆ ಅದರ ಋಣ ತೀರಿದಂತೆ. ನಮ್ಮಲ್ಲಿ ಅನೇಕರಿಗೆ ಪೆನ್ ಅನಗತ್ಯ ಅನುಪಯುಕ್ತ ಅಪ್ರಯೋಜಕ ವಸ್ತುವಾಗಿದೆ. ಬ್ಯಾಂಕಿನಲ್ಲಿ ಸಹಿ ಹಾಕಲು ಪೆನ್ ಬೇಕಾದಾಗ ಪಕ್ಕದವರ ಬಳಿ ತೆಗೆದುಕೊಂಡರಾಯಿತು..! 

ಮೊಬೈಲ್ ಮತ್ತು ಕಂಪ್ಯೂಟರ್ ಗಳು ಬರಹದ ಅವಶ್ಯಕತೆಗಳನ್ನು ಕಡಿಮೆ ಮಾಡಿದಂತೆ ಅನ್ನಿಸುತ್ತದೆ. ಆದರೆ ಅದು ವ್ಯವಹಾರದ ಅವಶ್ಯಕತೆಗಷ್ಟೇ ಸೀಮಿತವಾಗಬೇಕಲ್ಲವೇ? ಬರಹ ಅಷ್ಟು ನಿರುಪಯುಕ್ತವಾಯಿತೇ? ಸಂವಹನಾ ಮಾಧ್ಯಮವಾಗಿ ಮೊಬೈಲ್ / ದೂರವಾಣಿಗಳು ಹಳೆಯ ಪತ್ರಗಳಿಗಿಂತ ನೂರು ಪಟ್ಟು ವಾಸಿ. ಕೈ ಬರಹದ 'ಅರ್ಜಿ' ಗಿಂತ 'ಆನ್ಲೈನ್ ಅಪ್ಲಿಕೇಶನ್' ಸಾವಿರ ಪಟ್ಟು ವಾಸಿ. ಆದರೆ ಬರಹದ ಮಿತಿ ಅಷ್ಟೇ ಅಲ್ಲವಲ್ಲ. ಸಂವಹನೆಯ ದೃಷ್ಟಿಯಿಂದ ಅನೇಕ ಮಾಧ್ಯಮಗಳು ಇಂದು ಲಭ್ಯವಿದ್ದರೂ ಬರಹದ ಮಹತ್ವವನ್ನು ತಗ್ಗಿಸಲಾರವು. ವ್ಯವಹಾರಕ್ಕೆ ಹೊರತಾದ ಬರವಣಿಗೆಯನ್ನು ರೂಢಿಸಿಕೊಳ್ಳಲೇ ಬೇಕೆನ್ನುವವನು ನಾನು. ಅದು ನಮ್ಮ ಚಿಂತನಾ ಸರಣಿಯನ್ನು ಸರಳೀಕರಿಸುತ್ತದೆ. ಸಹಿ ಹಾಕುವುದು, ಅರ್ಜಿಗಳನ್ನು ತುಂಬುವುದನ್ನು ಹೊರತುಪಡಿಸಿ ವರ್ಷಕ್ಕೆ ಒಂದು ಪೆನ್ನನ್ನಾದರೂ ಖಾಲಿ ಮಾಡಬೇಕು. ನಮ್ಮ ಚಿಂತನೆಗಳನ್ನು ಬರಹರೂಪಕ್ಕೆ ಇಳಿಸಿ ವಿಮರ್ಶೆಗೊಳಪಡಿಸಿಕೊಳ್ಳಬೇಕು..!!

ಕೊನೆಯ ಹನಿ: ಬರೆಯಬೇಕೆಂಬ ಹಂಬಲವೇ ನಮ್ಮನ್ನು ಬರಹಗಾರರನ್ನಾಗಿ ಮಾಡಬಲ್ಲದು. ಬರೆಯೋಣ, ಮತ್ತೆ ಬೆಳೆಯೋಣ.

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಭಾದ್ರಪದ-ಕೃಷ್ಣ-ದ್ವಿತೀಯಾ.
೦೧-ಅಕ್ಟೋಬರ್-೨೦೨೩, ಭಾನುವಾರ.
ಬೆಂಗಳೂರು.

Saturday 11 December 2021

ಹವ್ಯಾಸಗಳಿಗೆ ಹಾಯ್! ಅನ್ನೋಣ

ಹವ್ಯಾಸಗಳಿಗೆ ಹಾಯ್! ಅನ್ನೋಣ!!   

ನಾನು ಮೊದಲಿನಿಂದಲೂ ಕೂಡ ಸ್ವಲ್ಪ ಓದುವ ಹಾಗೇ ಬರೆಯುವ ಹವ್ಯಾಸವನ್ನು ಇರಿಸಿಕೊಂಡಿದ್ದೆ. ಆದರೆ, ಈ ಹವ್ಯಾಸ ಕ್ರಮೇಣ ದೂರವಾಗುತ್ತಾ ಬಂದಿದ್ದನ್ನು ಗಮನಿಸಲೇ ಇಲ್ಲ..! ಕೆಲ ದಿನಗಳ ಹಿಂದೆ ನನ್ನ ತಲೆಯಲ್ಲಿ ಬರುವ ಯೋಚನೆ - ಚಿಂತನೆಗಳನ್ನು ಕಾಗದದಲ್ಲಿ ಮೂಡಿಸಬೇಕೆಂದು ಕುಳಿತಾಗ, ಬಹಳ ಅಸಾಧ್ಯವೇನೂ ಅನ್ನಿಸುವಷ್ಟು ನನ್ನ ಬರೆಯುವ ಹವ್ಯಾಸ ನನ್ನಿಂದ ದೂರವಾದದ್ದು ಭಾಸವಾಗಿತ್ತು. ಹವ್ಯಾಸಗಳೇ ಹಾಗೇ. ನಾವದನ್ನು ಸಾಕಿ-ಸಲಹ ಬೇಕು, ಇಲ್ಲವೇ ದೂರವಾಗುತ್ತವೆ. ಇದು ಬರವಣಿಗೆಗಷ್ಟೇ ಸೀಮಿತವಲ್ಲ. ಸಂಗೀತ, ಕವನ ರಚನೆ, ಚಿತ್ರ ಬಿಡಿಸುವುದು, ನೃತ್ಯ, ಕೊಳಲು, ತಬಲ, ಗಿಟಾರ್ ಇತ್ಯಾದಿ ವಾದನಗಳು..... ಹೀಗೆ ಎಲ್ಲ ಹವ್ಯಾಸಗಳಿಗೂ ಅನ್ವಯವಾಗುತ್ತದೆ. ಅಭ್ಯಾಸದಲ್ಲಿದ್ದರೆ ಮಾತ್ರ ಹವ್ಯಾಸ ನಮ್ಮಲ್ಲಿ ಜೀವಂತವಾಗಿದ್ದು ಜೀವನವನ್ನು ರಸಭರಿತವಾಗಿರಿಸಿರುತ್ತದೆ. 

ಒಮ್ಮೆ ಅವಲೋಕಿಸಿದರೆ ನನ್ನಲ್ಲೇ ಮೂಡುವ ಪ್ರಶ್ನೆ - ಹವ್ಯಾಸಗಳು ನಮಗೇಕೆ ಬೇಕು? ಹವ್ಯಾಸಗಳೇ ಇಲ್ಲದೆ ಜೀವನ ಸಾಧ್ಯವಿಲ್ಲವೇ? ನಮ್ಮಲ್ಲೇ ಅನೇಕರಿಗೆ ಹವ್ಯಾಸ ಬಿಡಿ, ಯಾವುದೇ ನಿಯಮಿತ ಅಭ್ಯಾಸಗಳೂ ಸಹ ಇರುವುದಿಲ್ಲ. ಈ ಹವ್ಯಾಸಗಳೊಂದ ನಮಗೇನಾದರೂ ಪ್ರಯೋಜನವಾದರೂ ಉಂಟೆ? ಮುಂದುವರಿದರೆ ಅನಿಸುತ್ತದೆ - ಖಂಡಿತ ಉಂಟೆಂದು...!! ಹವ್ಯಾಸಗಳು ದೀರ್ಘಾವಧಿಯಲ್ಲಿ ನಮ್ಮಲ್ಲೊಂದು ನೆಮ್ಮದಿಯನ್ನು ಮೂಡಿಸುವುದನ್ನು ಕಂಡಿದ್ದೇನೆ. ಅದು ಒಂಟಿತನವನ್ನು ದೂರವಾಗಿಸುತ್ತದೆ. ನಮ್ಮನ್ನು ಪರಿಣಿತರನ್ನಾಗಿಸುತ್ತದೆ. 

ಅನೇಕರು ತಮ್ಮಲ್ಲಿರುವ ಹವ್ಯಾಸಗಳನ್ನು ಪೋಷಿಸಿ, ಅದನ್ನೇ ಪವೃತ್ತಿಯನ್ನಾಗಿಸಿ, ಕ್ರಮೇಣ ವೃತ್ತಿಯನ್ನಾಗಿರಿಸಿಕೊಂಡಿರುತ್ತಾರೆ. ಪ್ರಸಿದ್ಧ ಸಂಗೀತಗಾರರು, ಚಿತ್ರಕಲಾಕಾರರು, ಬರಹಗಾರರು, ಹಾಸ್ಯ ಕಲಾವಿದರು......ಹೀಗೆ. ಇನ್ನು ಕೆಲವರು ಹವ್ಯಾಸಗಳನ್ನು ವೃತ್ತಿಯಾಗಲ್ಲದಿದ್ದರೂ, ಪ್ರವೃತ್ತಿಯನ್ನಾಗಿರಿಸಿಕೊಂಡಿರುತ್ತಾರೆ. ನಾಟಕಕಾರರು, ವನ್ಯಜೀವಿ ಛಾಯಾಗ್ರಾಹಕರು, ಹವ್ಯಾಸಿ ಲೇಖಹರು...ಇತ್ಯಾದಿ.  ಮತ್ತೆ ಕೆಲವರು ತಮ್ಮಲ್ಲಿರುವ ಹವ್ಯಾಸವನ್ನು ಕೇವಲ ಹವ್ಯಾಸದ ಹಂತದಲ್ಲಿಯೇ ಇರಿಸಿಕೊಂಡಿರುತ್ತಾರೆ. ನಾನು ಈ ಗುಂಪಿನಲ್ಲಿ ಬರುತ್ತೇನೆ ಅನ್ನಿಸುತ್ತದೆ.  ಚಿಂತನೆಗಳಿಗೆ ಅಕ್ಷರದ ರೂಪ ಕೊಡುವ ಹವ್ಯಾಸ ನನ್ನದು. ಈಗ ಕಷ್ಟಪಟ್ಟು ಈ ಹವ್ಯಾಸವನ್ನು ಮತ್ತೆ ಚಿಗುರಿಸುವ ಪ್ರಯತ್ನ ಮಾಡುತ್ತಿದ್ದೇನೆ. 

ನನ್ನ ಪ್ರಕಾರ ಉತ್ತಮ ಹವ್ಯಾಸಗಳು ನಮ್ಮಲ್ಲಿರಲೇ ಬೇಕು - ಇಲ್ಲದಿದ್ದರೆ ಕಷ್ಟಪಟ್ಟು ರೂಢಿಸಿಕೊಳ್ಳಬೇಕು. ಹವ್ಯಾಸಗಳು ನಮ್ಮೊಂದಿಗೆ ನಾವೇ ಮಾತನಾಡಿಕೊಳ್ಳುವ ವಿಧಾನವೂ ಹೌದು, ನಮ್ಮನ್ನು ನಮಗೇ ಅರ್ಥ ಮಾಡಿಸುವ ಸಾಧನವೂ ಹೌದು. ಹವ್ಯಾಸ ನಮ್ಮನ್ನು engage  ಮಾಡಿಡುತ್ತದೆ (ತೊಡಗಿಸಿಡುತ್ತದೆ). Let me put it in another way ! ನಾವು ಸ್ವಭಾವ ಸಹಜ ಯಾವಾಗಲೂ engage ಆಗಿಯೇ ಇರುತ್ತೇವೆ. ಉತ್ತಮ ಹವ್ಯಾಸಗಳು ಇರದೇ ಇದ್ದಾಗ ಅದರ ಜಾಗವನ್ನು ಬೇರೆಯವು ಆಕ್ರಮಿಸಿಕೊಳ್ಳುತ್ತವೆ ಅಷ್ಟೇ. 

ನನ್ನಲ್ಲಿ ನಾನೇ ಕಂಡುಕೊಂಡಂತೆ, ಏನು ಮಾಡಬೇಕೆಂದು ತೋಚದೇ ಇದ್ದಾಗ ನನ್ನನ್ನು Facebook ಓಗೊಟ್ಟು ಕರೆಯುತ್ತದೆ. ಸಮಯ ಹೋದದ್ದೇ ತಿಳಿಯುವುದಿಲ್ಲ. ಅಷ್ಟರಲ್ಲಿ, Twitter , Whatsapp ಗಳು ತಮ್ಮನ್ನು ಸಹ ಮಾತನಾಡಿಸುವಂತೆ ಅಳುತ್ತವೆ! ಇವರನ್ನು ಮಾತನಾಡಿಸಿ ಮುಗಿಸುವ ವೇಳೆಗೆ, Instagram ನೆನಪಾಗುತ್ತದೆ. ಇಷ್ಟರ ಮಧ್ಯೆ ನನ್ನ ಓದುವ - ಬರೆಯುವ ಹವ್ಯಾಸ ಒಂದು ಹೆಜ್ಜೆ ಹಿಂದೆ ಹಾಕಿರುತ್ತದೆ. ನಾನು ಇದನ್ನು ಗಮನಿಸಿಕೊಂಡಾಗ ಬಹಳ ಪ್ರಯತ್ನ ಮಾಡಿ ಏನಾದರೂ ಓದಬೇಕು - ಬರೆಯಬೇಕು ಅಂದುಕೊಂಡೆ. ಆದರೆ ಹಳೆಯ ಅಭ್ಯಾಸ ಮತ್ತೆ ನನ್ನನ್ನು Mobile ಕಡೆಗೆ ಕೊಂಡೊಯ್ಯುವುದನ್ನು ಗಮನಿಸಿದೆ. ಅದೇಕೆ ಹೀಗೆ ಎಂದು ಯೋಚಿಸಿದಾಗ, ನನಗನಿಸಿದ್ದು - ಅಲ್ಲಿ ನಿಶ್ಚಿತ ಗುರಿ ಇಲ್ಲ, ಹಾಗೆಯೇ ಯಾವುದೇ ಶ್ರಮ ಇಲ್ಲ...! ಆದರೆ ಹವ್ಯಾಸಗಳು ಹಾಗಲ್ಲ - ಸ್ವಲ್ಪ ಶ್ರಮ ಬೇಕೇ ಬೇಕು - They demand time , they demand attention . ಹಾಗಾಗಿಯೇ ಅನೇಕರ ಉತ್ತಮ ಹವ್ಯಾಸಗಳನ್ನು ಮೊಬೈಲ್ ನುಂಗಿ ಹಾಕುತ್ತದೆ. ಕಾಲ ಕ್ರಮೇಣ Mobile ನಲ್ಲಿ Apps ಅನ್ನು switch ಮಾಡುವುದೇ ಹವ್ಯಾಸವಾಗಿಬಿಡುತ್ತದೆ...!! ಇದು ನನ್ನ ಅನುಭವವೂ ಹೌದು. 

ನಮ್ಮ ಹವ್ಯಾಸ ನಮಗಷ್ಟೇ ಅಲ್ಲದೆ ಇತರರಿಗೂ ಖುಷಿಯನ್ನುಂಟು ಮಾಡಿದರೆ - That's great !!

ಕೊನೆಯ ಹನಿ: ಹವ್ಯಾಸಗಳು ನಮಗಿರಬೇಕು. ಇಲ್ಲದಿದ್ದರೆ ರೂಢಿಸಿಕೊಳ್ಳಬೇಕು. ಅದೊಂಥರಾ Investment ಇದ್ದಹಾಗೆ. The early we invest, the more we invest - results in more returns....!! So , ದುರಭ್ಯಾಸಗಳಿಗೆ ವೇಸ್ಟ್ ಮಾಡುವ ಬದಲು ಹವ್ಯಾಸಗಳಿಗೆ ಇನ್ವೆಸ್ಟ್ ಮಾಡೋಣ...!

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಮಾರ್ಗಶೀರ್ಷ-ಶುಕ್ಲ-ನವಮಿ, ಭಾನುವಾರ.
೧೨-ಡಿಸೆಂಬರ್-೨೦೨೧ , ಭಾನುವಾರ.
ಬೆಂಗಳೂರು.


Saturday 29 February 2020

ರೀಡಿಂಗ್ ಅನ್ನು ರೂಢಿಸಿಕೊಳ್ಳೋಣ

ರೀಡಿಂಗ್ ಅನ್ನು ರೂಢಿಸಿಕೊಳ್ಳೋಣ

ಇಂದಿನ ಕಾಲಮಾನದಲ್ಲಿ "ಓದುವುದು" ಎಂಬ ಪ್ರಕ್ರಿಯೆ ಶಾಲಾ-ಕಾಲೇಜು ಹಂತಕ್ಕಷ್ಟೇ ಸೀಮಿತವಾಗಿದೆ. ಕಾಲೇಜಿನ ನಂತರವೂ ಓದುವುದು ಒಂದು ನಿರರ್ಥಕ ಕ್ರಿಯೆ ಎಂಬ ಭಾವನೆ ನಮ್ಮಲ್ಲನೇಕರಿಗಿದೆ. ನಾವು ಇದಕ್ಕೆ ಬಹು ದೊಡ್ಡ ಕಾರಣ 'ಡಿಜಿಟಲೈಜೆಷನ್' ಅಂದುಕೊಂಡಿದ್ದೇವೆ. ಆದರೆ ನಾವೆಷ್ಟು ಜನ ಓದುವ ಪ್ರಕ್ರಿಯೆಯನ್ನು 'ಡಿಜಿಟಲ್' ರೂಪದಲ್ಲಿ ರೂಢಿಸಿಕೊಂಡಿದ್ದೇವೆ? ಬೆರಳೆಣಿಕೆಯಷ್ಟು ಮಾತ್ರ. ನಾನಿಲ್ಲಿ ಹೇಳಬಯಸುತ್ತಿರುವುದು 'ಓದು' ಎಂಬ ಪ್ರಕ್ರಿಯೆಯ ಕುರಿತೇ ವಿನಃ ಓದುವ ಮಾಧ್ಯಮದ ಕುರಿತಲ್ಲ. ಶಾಲಾ-ಕಾಲೇಜಿನ ನಂತರ  ನಾವೇಕೆ ಓದುವುದನ್ನು ನಿಲ್ಲಿಸುತ್ತೇವೆ ಎಂದು ಯೋಚಿಸಿದಾಗ ನನಗನಿಸಿದ್ದನ್ನುಇಲ್ಲಿ ಬರೆಯುತ್ತಿದ್ದೇನೆ.

ನಾವು ಓದುವ ರೂಢಿಯನ್ನು ಬಿಡಲು ಪ್ರಮುಖ ಕಾರಣ 'ಓದು' ಎನ್ನುವುದು ಒಂದು ಅಪ್ರಯೋಜಕ - ಅಪ್ರಸ್ತುತ ಕ್ರಿಯೆ ಅಂದುಕೊಂಡಿರುವುದೇ ಆಗಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಕೂಡ "ಓದುವುದು ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ" ಎಂಬ ಅಘೋಷಿತ ನಿಲುವನ್ನು ನಮ್ಮಲ್ಲಿ ತುಂಬಿಸಿದೆ. ಹಾಗಾಗಿ ಪರೀಕ್ಷೆ ಇಲ್ಲದೆ ಓದುವುದು ಅಪ್ರಸ್ತುತವಲ್ಲದೆ ಇನ್ನೇನು ಅನಿಸುವುದು ಸಹಜವೇ ಆಗಿದೆ. ಇದಕ್ಕೆ ಪೂರಕವಾಗಿ ನಮ್ಮಲ್ಲನೇಕರಿಗೆ "ಮಾಹಿತಿ" ಹಾಗೂ "ಜ್ಞಾನ" ಇವುಗಳ ನಡುವಿನ ಅಂತರ ತಿಳಿಯದಾಗಿದೆ. ಮಾಹಿತಿಯನ್ನೇ ಜ್ಞಾನ ಅಂದುಕೊಂಡಾಗ ನಿರಂತರ ಓದು ಅಪ್ರಯೋಜಕವಾಗುತ್ತದೆ. ಇಂದಿನ ಜೀವನ ಪದ್ಧತಿಯೂ ಸಹ ಮಾಹಿತಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಜ್ಞಾನಕ್ಕೆ ಕೊಡುವುದಿಲ್ಲ. ಈ ಕಾರಣದಿಂದಾಗಿಯೇ ನಿರಂತರ ಮಾಹಿತಿ ಬಿತ್ತರಿಸುವ 24X7 ನ್ಯೂಸ್  ಚಾನೆಲ್ ಗಳು ನಾಯಿಕೊಡೆಗಳಂತೆ ಎಲ್ಲಡೆ ಹಬ್ಬಿರುವುದು..! ಈ ರೀತಿಯ ಮಾಹಿತಿಗಳಿಗೆ ಮಾಧ್ಯಮವಾಗಿರುವುದರಿಂದ ತಾನೇ ಫೇಸ್ಬುಕ್ , ವಾಟ್ಸಪ್ಪ್ , ಟ್ವಿಟ್ಟರ್ ಗಳು ನಮ್ಮ ಜೀವನದ ಅಂಗವಾಗಿರುವುದು..!!

ಮಾಹಿತಿಗಳನ್ನು ಹೊಂದುವುದೇ ಪ್ರಮುಖವಾದಾಗ, ನಿರಂತರ ಓದುವುದು ಅಷ್ಟೇನೂ ಪ್ರಯೋಜನಕಾರಿಯಾಗುವುದಿಲ್ಲ. ಹಾಗಾಗಿ ನಾವು ಎಷ್ಟು ಬೇಕೋ ಅಷ್ಟು ಮಾಹಿತಿಯನ್ನು ಇಂಟರ್ನೆಟ್ ನಿಂದ ತೆಗೆದುಕೊಂಡು ಸುಮ್ಮನಾಗಿಬಿಡುತ್ತೇವೆ. (ಇದೆ ಇಂಟರ್ನೆಟ್ ಜ್ಞಾನಾರ್ಜನೆಗೆ ಬಹಳ ಒಳ್ಳೆಯ ಮಾಧ್ಯಮವಾಗಬಲ್ಲದು ಎಂಬುವುದೇ ಇನ್ನೊಂದು ಅಂಶ).  ಒಂದು ವಿಷಯವನ್ನು ಕುರಿತು ಕೆಲ ಪುಟಗಳನ್ನು ಓದುವುದು ನಿಜಕ್ಕೂ ಅಸಾಧ್ಯವಾಗಿ ಬಿಟ್ಟಿದೆ. ಕಾಲೇಜಿನಲ್ಲಿಯೇ ನೋಡಿ, ಟೆಕ್ಸ್ಟ್ ಬುಕ್, ರೆಫೆರೆನ್ಸ್ ಬುಕ್ ಗಳಿಗಿಂತ ಪ್ರೊಫೆಸರ್ ಕೊಡುವ ಜೆರಾಕ್ಸ್ ನೋಟ್ಸ್ ಗಳು ಹೆಚ್ಚು ಪ್ರಿಯವಾಗುತ್ತವೆ, ಅಲ್ಲವೇ? !

ಇದಕ್ಕೆ ಸರಿಯಾಗಿ ಇಂದಿನ ಧಾವಂತ ಜೀವನದಲ್ಲಿ ನಮಗೆ ಆಫೀಸ್ ಕೆಲಸ ಬಿಟ್ಟು ಬೇರೆ ಜೀವನವೇ ಇಲ್ಲದಂತಾಗಿದೆ. ೯-೧೨ ಘಂಟೆಗಳ ಆಫೀಸ್ ಕೆಲಸ, ಅದಕ್ಕೆ ೧-೨ ಘಂಟೆಗಳ ಪ್ರಯಾಣ..! ಕೆಲವರು ೧೦ ಘಂಟೆ ಕೆಲಸ ಮಾಡಲು ೫ ಘಂಟೆ ಪ್ರಯಾಣಿಸುವುದನ್ನೂ ನೋಡಿದ್ದೇನೆ. ಸಮಯವಷ್ಟೂ ಟ್ರಾಫಿಕ್ ನಲ್ಲಿ, ಆಫೀಸ್ ನಲ್ಲಿ ಹೋದರೆ ಓದುವ ಮಾತಿನ್ನೆಲ್ಲಿ, ಅಲ್ಲವೇ? ಹೀಗಾಗಿ ನಮಗೆ ಸಮಯವೇ ಇಲ್ಲದಾಗಿದೆ. ಇದ್ದರೂ ತಲೆಗೆ ಕೆಲಸ ಕೊಡದೇ ಸುಮ್ಮನೆ ಕಣ್ಣಾಡಿಸುವ ಫೇಸ್ಬುಕ್ , ವಾಟ್ಸಪ್ಪ್ ಗಳು ಹೆಚ್ಚು ಆಕರ್ಷಣೀಯವಾಗುತ್ತವೆ.

ಆದರೆ, ನಾವು ಜ್ಞಾನಾರ್ಜನೆಗಾಗಿ, ಹೊಸ ವಿಚಾರಗಳಿಗಾಗಿ ಓದುವುದನ್ನು ರೂಢಿಸಿಕೊಳ್ಳಬೇಕು. ಓದುವ ಮಾಧ್ಯಮ ಯಾವುದೇ ಇರಲಿ - ಅದು ಪುಸ್ತಕವೇ ಆಗಿರಲಿ ಅಥವಾ ಡಿಜಿಟಲ್ ಮಾಧ್ಯಮವೇ ಆಗಿರಲಿ, ನಿರಂತರ ಓದುವ ಹವ್ಯಾಸ ನಮ್ಮದಾಗಬೇಕು. ಓದುವುದು ನಮ್ಮ ಚಿಂತನಾ ಪ್ರಪಂಚಕ್ಕೆ ಹೊಸದಾದ ಪೂರಕ ಅಂಶಗಳನ್ನು ಸಂಗ್ರಹಿಸುತ್ತದೆ. ಒಳ್ಳೆಯ ಭಾಷಾ ಜ್ಞಾನವೂ ನಮ್ಮದಾಗುತ್ತದೆ. ಚಿಂತನಾ ಶಕ್ತಿಯನ್ನೂ ವೃದ್ಧಿಸುವಂತೆ ಮಾಡುತ್ತದೆ. ನಾವು ಗ್ರಂಥಾಲಯಗಳಿಗೆ ಭೇಟಿ ಕೊಡುವುದನ್ನು ಅಭ್ಯಸಿಸಿಕೊಳ್ಳಬೇಕು. ಅಲ್ಲಿರುವ ಪುಸ್ತಕಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅವಕಾಶವಿದ್ದರೆ ಮನೆಗಳಲ್ಲಿ ಸಂಗ್ರಹಯೋಗ್ಯ ಪುಸ್ತಕಗಳನ್ನು ಇಟ್ಟುಕೊಳ್ಳಬೇಕು. ಮಕ್ಕಳಿಗೆ ಪಠ್ಯೇತರ ಪುಸ್ತಕಗಳನ್ನು ಓದಲು ಪ್ರೇರೇಪಿಸಬೇಕು. ಮೊಬೈಲ್, ಲ್ಯಾಪ್ಟಾಪ್, ಬೈಕ್-ಕಾರ್ ಗಳಂತೆ ಪುಸ್ತಕಗಳೂ ನಮ್ಮ ಜೀವನದ ಭಾಗವಾಗಬೇಕು. ಒಟ್ಟಿನಲ್ಲಿ "ಓದುವುದು" ಒಂದು ದೈನಂದಿನ ಚಟುವಟಿಕೆಯಾಗಬೇಕು.

ಮಾಹಿತಿ ಎನ್ನುವುದು ಕ್ಷಣಿಕವಾದ ಆಗು-ಹೋಗುಗಳ ಸಂಗ್ರಹವಷ್ಟೇ. ಹಾಗಾಗಿಯೇ, ಇಂದಿನ ದಿನಪತ್ರಿಕೆ ನಾಳೆ ಹಳಸಾಗುವುದು. ಮಾಹಿತಿಗಳ ಆಗರಗಳಾದ ಫೇಸ್ಬುಕ್, ವಾಟ್ಸಪ್ಪ್, ಟ್ವಿಟ್ಟರ್ ಗಳಿಗೆ ಅರ್ಪಿಸುವ ಕೊಂಚ ಸಮಯವನ್ನು ಓದುವುದರಲ್ಲಿ ವಿನಿಯೋಗಿಸಿದರೆ  - ಬದುಕು ಹಸನಾಗುವುದಲ್ಲವೇ..?! ದಿನಕ್ಕೆ ಕೇವಲ ೩೦ ನಿಮಿಷಗಳನ್ನು ಓದಲು ನೀಡಿದರೂ ನಮ್ಮ ಚಿಂತನ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಕಾಣಬಹುದು.

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಫಾಲುನ-ಶುಕ್ಲ-ಷಷ್ಠಿ,
೨೯-ಫೆಬ್ರುವರಿ-೨೦೨೦, ಶನಿವಾರ
ಬೆಂಗಳೂರು.

Thursday 12 September 2019

ಜೋಗ ಜಲಪಾತ

ಜೋಗದ ಸಿರಿ 


ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ|
ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ ||
ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ |
ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ ||
ಡಾ. ರಾಜ್ ಹಾಡಿದ ಈ ಹಾಡನ್ನು ಕೇಳುತ್ತಾ ನನಗೆ ಜೋಗ ನೋಡಬೇಕೆನಿಸಿತು. ಹಾಗೆಯೇ ಮೊನ್ನೆ ಜೋಗ ಜಲಪಾತವನ್ನು ನೋಡಲು ಹೋಗಿದ್ದೆ. ಧುಮ್ಮಿಕ್ಕುವ ಈ ಜಲಪಾತವನ್ನು ನೋಡಿ ನನಗನಿಸಿದ್ದು :
ಓ ಜೋಗ!
ನಾನೊಬ್ಬ ಪ್ರವಾಸಿಗ.
ನಾನೀಗ ನಿನ್ನ ನೋಡುಗ.
ಹೇಳತೀರದು ನಿನ್ನ ಸೊಬಗ!!

ಪ್ರಕೃತಿಯ ಮಡಿಲು ತಾಯಿಯ ಮಡಿಲಿನಷ್ಟೇ ಸಂತೋಷವನ್ನುಂಟು ಮಾಡುತ್ತದೆ. ಅದು ವರ್ಣಿಸಲು ಅಸಾಧ್ಯ - ಅದನ್ನು ಅನುಭವಿಸಿಯೇ ತಿಳಿಯಬೇಕು. ಹರಿಯುವ ನದಿ, ಧುಮ್ಮಿಕ್ಕುವ ಜಲಪಾತ, ಉದಯಿಸುವ ಸೂರ್ಯ, ಸಮುದ್ರ ತೀರದ ಸೂರ್ಯಾಸ್ತ, ಪರ್ವತ-ಶಿಖರ - ಅದರ ಮೇಲಣ ಮಂಜು - ಹೀಗೆ ಪ್ರಕೃತಿ ಅನೇಕ ವಿಭಿನ್ನ- ವಿಸ್ಮಯ-ವಿಚಿತ್ರ ಸಂತೋಷದ ಸ್ರೋತಗಳನ್ನು ಮಾನವನಿಗೆ ನೀಡಿದೆ. ಹೀಗಾಗಿ ನಾವು ಈ ಪ್ರಕೃತಿ ದೇವಿಗೆ ಆಭಾರಿಯಾಗಲೇ ಬೇಕು.

ಸಹ್ಯಾದ್ರಿ ಶ್ರೇಣಿ ಇಂತಹ ಅದೆಷ್ಟೋ ಕೌತುಕ ಗಳನ್ನು ತನ್ನ ಸೆರಗಿನಲ್ಲಿ ಇರಿಸಿಕೊಂಡಿದೆ. ಶಿವಮೊಗ್ಗೆಯ ಜೋಗ ಜಲಪಾತ ಅದರಲ್ಲಿ ಒಂದಷ್ಟೆ. ಜೋಗದ ಭೋರ್ಗರೆಯುವ ಜಲಪಾತ ನೋಡಿದಾಗ ನಾವು ನಮ್ಮನ್ನು ಮರತೇ ಬಿಡುತ್ತೇವೆ. ಅಂತಹ ರೋಮಾಂಚಕತೆ ಅಲ್ಲಿದೆ. ಮಳೆಗಾಲದಲ್ಲಿ ಶರಾವತಿ ಮಾಡುವ ರೌದ್ರ ನರ್ತನವದು. ಈ ನೈಜ ನರ್ತನವನ್ನು ನೋಡಲು ಬರುವ ಪ್ರವಾಸಿಗರೆಷ್ಟೋ! ಎಲ್ಲರ ಕಣ್ಮನ ತಣಿಸುತ್ತದೆ ಈ ಜಲಧಾರೆ. ಇದನ್ನು ನೋಡಿಯೇ ಅಲ್ಲವೇ ಹೇಳಿದ್ದು "ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ" ಎಂದು..!

ನದಿಯ ರೂಪದಲ್ಲಿ ಶಾಂತವಾಗಿ ಹರಿಯುವ ಶರಾವತಿಯ ನೀರು ೮೩೦ ಅಡಿ ಎತ್ತರದಿಂದ ಬೀಳುವಾಗ ರೂಪುಗೊಳ್ಳುವುದೇ ಈ ಜಗತ್ಪ್ರಸಿದ್ಧ ಜಲಪಾತ. ಇಂತಹ ಜಲಧಾರೆಯನ್ನು ಮಂಜಿನ ಮೋಡ ತನ್ನ ಸೆರಗಿನಿಂದ ಮುಚ್ಚುತ್ತದೆ. ಅತ್ತ ಗಾಳಿ ಅದನ್ನು ಸರಿಸಿ ನಮಗೆ ತೋರಿಸುತ್ತದೆ. ಇದರ ಮಧ್ಯೆ ಮಳೆರಾಯ ಮೇಲಿನಿಂದ ಇಣುಕುವ ಪ್ರಯತ್ನ ಮಾಡುತ್ತಾನೆ. ಹೀಗೆ ನೀರು, ಮೋಡ, ಗಾಳಿ, ಮಳೆಗಳ ಆಟವನ್ನು ನೋಡಿದಾಗ ಹೃದಯ ಅರಳುತ್ತದೆ, ಮನಸ್ಸು ಹಗುರ ವಾಗುತ್ತದೆ.

ಸದಾ ನಿಮ್ಮವ,
ಹ. ನಾ. ಮಾಧವ ಭಟ್
ಭಾದ್ರಪದ-ಶುಕ್ಲ-ಚತುರ್ದಶೀ
೨೦: ಸೆಪ್ಟೆಂಬರ್ : ೨೦೧೯, ಗುರುವಾರ.
ಸಾಗರ.

Thursday 15 August 2019

ಹೂವು ಮತ್ತು ನಾವು

ಹೂವು ಮತ್ತು ನಾವು 

ಮೊನ್ನೆ ಹೀಗೆ ಸುಮ್ಮನೆ ಲಾಲ್ ಬಾಗ್ ಗೆ ಹೋಗಿದ್ದೆ. ಮೈಸೂರಿನ ಒಡೆಯರ್ ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಅರಳಿದ ಹೂವುಗಳಿಂದ ಅರಮನೆ ನಿರ್ಮಿಸುವ ಪ್ರಯತ್ನ ಅಲ್ಲಿತ್ತು. ಲಕ್ಷ - ಲಕ್ಷ ಹೂವುಗಳನ್ನು ಸೇರಿಸಿ ನಿರ್ಮಿಸಿದ ಆ 'ಪುಷ್ಪಜಾತ' ಕಲಾಕೃತಿಗಳು ಮನಸ್ಸನ್ನೇ ತೇಲುವಂತೆ ಮಾಡಿತು. ಹೂವಿಗಿರುವ ಶಕ್ತಿ ಅದು. ಹೂವು, ಕಾಣದ ಮನಸ್ಸನ್ನು ಸೆರೆಹಿಡಿದು ಕೊನೆಗೆ ನಮ್ಮನ್ನೇ ಮಾಯೆಗೊಳಪಡಿಸುತ್ತದೆ. ಲಾಲ್ ಬಾಗ್ ನ ಆ ಪುಷ್ಪರಾಶಿಯು  ಹೂವಿನ ಬಗ್ಗೆ, ಹೂವಿನ ಸಾಮರ್ಥ್ಯದ ಬಗ್ಗೆ, ಹೂವು ನಮ್ಮ ಜೀವನದಲ್ಲಿ ಹಾಸುಹೊಕ್ಕಿರುವುದರ ಬಗ್ಗೆ ಚಿಂತನೆ ನೆಡೆಸುವಂತೆ ಪ್ರೇರೇಪಿಸಿತು. ಕಣ್ಣಿನಿಂದ ಸೆರೆಹಿಡಿಯಬೇಕಾದ ಹೂವಿನ ಸೌಂದರ್ಯವನ್ನು ಲೇಖನಿಯಿಂದ ಸೆರೆಹಿಡಿಯುವ ಒಂದು ಪ್ರಯತ್ನ ಇದು.
ಪ್ರಕೃತಿಯ ಸೊಬಗನ್ನು ಇಮ್ಮಡಿಗೊಳಿಸುವ ಅನೇಕ ಸಂಗತಿಗಳಲ್ಲಿ 'ಹೂವು' ಒಂದು. ಹೂವು ಸೌಂದರ್ಯದ ಸಾಕಾರ ರೂಪ. ಹೂವು ತಾನೂ ಅರಳಿ ನೋಡುಗರ ಕಣ್ಣನ್ನೂ ಅರಳಿಸುವ ಸಾಮರ್ಥ್ಯ ಹೊಂದಿದೆ. ಪ್ರತಿನಿತ್ಯ ಸೂರ್ಯನೊಂದಿಗೇ ಅರಳಿ ಸೂರ್ಯನೊಂದಿಗೇ ಅಳಿಯುವ ಈ ಹೂವುಗಳು ಪ್ರಕೃತಿಯ ವಿಸ್ಮಯಗಳಲ್ಲೊಂದಾಗಿವೆ.
ಬ್ರಹ್ಮಕಮಲ & ನೀಲ ಕುರಿಂಜಿ
ಹೂವುಗಳೂ ಅನೇಕ ಅವುಗಳ ಪ್ರಾಕಾರಗಳೂ ಅನೇಕ. ಗಾತ್ರದಲ್ಲಿ ಚಿಕ್ಕದಾದ ಮಲ್ಲಿಗೆ, ದೊಡ್ಡದಾದ ದಾಸವಾಳ, ರಾತ್ರಿ ಮಾತ್ರ ಅರಳುವ ಬ್ರಹ್ಮಕಮಲ, ೧೨ ವರ್ಷಗಳಿಗೊಮ್ಮೆ ಮಾತ್ರ ಅರಳುವ ನೀಲ ಕುರಿಂಜಿ, ಪರಿಮಳ ಸೂಸುವ ಸಂಪಿಗೆ, ಪರಿಮಳವೇ ಇಲ್ಲದ ಜಿನಿಯಾ, ಸೂರ್ಯನೊಂದಿಗೇ ಸಂಚರಿಸುವ ಸೂರ್ಯಕಾಂತಿ - ಹೀಗೆ ಹೂವುಗಳ ಲೋಕ ಅದ್ಭುತವೇ ಸರಿ. ಹೂವು ಹೇಗಿದ್ದರೂ ಎಲ್ಲಿದ್ದರೂ ಮನುಷ್ಯನ ಮನಸ್ಸನ್ನು ಮುದಗೊಳಿಸುವ ಸಾಮರ್ಥ್ಯ ಹೊಂದಿದೆ.

ಹೀಗೆ ಸೌಂದರ್ಯದ ಸಾಕಾರವಾಗಿರುವ ಹೂವುಗಳು ಮನಸ್ಸನ್ನು ವಿಕಸಿತಗೊಳಿಸುವುದರ ಜೊತೆಗೆ ಜೀವನ ಸಂದೇಶ ಸಾರುವ ಗುರುವೂ ಆಗಿವೆ. ಗುಲಾಬಿಯಂಬ ಒಂದು ಹೂವನ್ನು ಉದಾಹರಿಸಿ ಡಿ.ವಿ.ಜಿ. ಹೀಗೆ ಹೇಳುತ್ತಾರೆ.
ಹೂವ ತಳೆದ ಗುಲಾಬಿಯಿಂದ ಮನಕಹುದೇನು? |
ನೋವೋ? ಸಂತಸವೋ? ನೋಡಾಮುಳ್ಳು ಬಾಳ್ಗೆ ||
ಹೂವೆ ದಿವ್ಯಕೀರೀಟವದುವೆ ಕಾಲಕಟಾಕ್ಷ |
ಜೀವನದ ತಿರುಳಷ್ಟೆ - ಮಂಕುತಿಮ್ಮ ||
ಅಂದರೆ - ಹೂವನ್ನು ಹೊಂದಿರುವ ಗುಲಾಬಿ ಗಿಡವನ್ನು ನೋಡಿದಾಗ ನಮಗೆ ಏನನಿಸುತ್ತದೆ? ನೋವೋ? ಅಥವಾ ಸಂತೋಷವೋ? ಮುಳ್ಳುಗಳೇ ತುಂಬಿರುವ ಗಿಡಕ್ಕೆ ಹೂವೆ ಕಿರೀಟ! ಹಾಗೆ ನಾವು ಕಷ್ಟಗಳೆಂಬ ಮುಳ್ಳುಗಳನ್ನು ಸಹಿಸಿ ಜೀವನ ನೆಡೆಸಿದರೆ ಮುಂದೆ ಸುಖವೆಂಬ ಗುಲಾಬಿ ಹೂವು ದೊರಕುತ್ತದೆ - ಇದುವೇ ಗುಲಾಬಿ ನಮಗೆ ಸಾದರಪಡಿಸುವ ಜೀವನ ಸ್ವಾರಸ್ಯವಾಗಿದೆ.


ನಮ್ಮಲ್ಲಿ ಹೂವಿನಿಂದ ಹೊರತಾದ ಜೀವನವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಹುಟ್ಟಿನಿಂದ ಸಾಯುವವರೆಗೂ ಹೂವು ಬೇಕೇ ಬೇಕು. ಪೂಜೆ-ಪುನಸ್ಕಾರಗಳು ಹೂವುಗಳಿಲ್ಲದೆ ಅಪೂರ್ಣ. ಗೌರವ ಸಮರ್ಪಣೆಗೂ ಇದೇ ಹೂವುಗಳು ಬೇಕು. ಪ್ರೇಮಿಗಳಿಗೆ ಹೂವು ಪ್ರೇಮ ನಿವೇದನೆಯ ಮಾಧ್ಯಮ. ನಾವು ಮೊದಲರಾತ್ರಿಗೂ ಹೂವು ಉಪಯೋಗಿಸುತ್ತೇವೆ ಹಾಗೆ ಅಂತಿಮ ಯಾತ್ರೆಗೂ ಹೂವು ಬಳಸುತ್ತೇವೆ. ಹೂವು ನಮ್ಮಲ್ಲನೇಕರಿಗೆ ಜೀವನವನ್ನು ಕಟ್ಟಿಕೊಟ್ಟಿದೆ. ಪುಷ್ಪಕೃಷಿ ಇವತ್ತಿನ ಲಾಭದಾಯಕ ಕೃಷಿಗಳಲ್ಲೊಂದು. ಹೇಗೆ ಹೂವನ್ನು ಅನೇಕರು ಅನೇಕ ಕಾರಣಗಳಿಗಾಗಿ ಅಪ್ಪಿಕೊಳ್ಳುತ್ತಾರೆ.
ಅವರವರ ಭಾವಕ್ಕೆ - ಅವರವರ ಭಕುತಿಗೆ !
ಡಿ.ವಿ.ಜಿ.ಯವರು ಇನ್ನೊಂದು ಕಗ್ಗದಲ್ಲಿ ಹೀಗೆ ಹೇಳುತ್ತಾರೆ.
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ |
ಮಡದಿ ಮುಡಿದಿರುವ ಹೂ ಯುವಕನಿಗೆ ಚೆಂದ ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ  |
ಬಿಡಿಗಾಸು ಹೂವಳಿಗೆ - ಮಂಕುತಿಮ್ಮ ||
ತಾತ್ಪರ್ಯ - ಪ್ರಕೃತಿಯನ್ನು ಪ್ರೀತಿಸುವವನು ಹೂವನ್ನು ಗಿಡದಲ್ಲಿ ನೋಡಿ ಸಂತೋಷಿಸುತ್ತಾನೆ, ಅದೇ ಹೊಸತಾಗಿ ಮದುವೆಯಾದವ ಹೂವನ್ನು ತನ್ನ ಹೊಂಡತಿಯ ಜಡೆಯಲ್ಲಿ ನೋಡಿ ಖುಷಿಪಡುತ್ತಾನೆ. ಹಾಗೆ, ದೈವಭಕ್ತನು ದೇವಸ್ಥಾನದಲ್ಲಿ ಸಿಗುವ ಹೂವನ್ನು ಪ್ರಸಾದವೆಂದು ಪಡೆದು ಧನ್ಯನಾಗುತ್ತಾನೆ. ಆದರೆ, ಅದೇ ಹೂವನ್ನು ಮಾರುವ ಹೂವಾಡಗಿತ್ತಿಗೆ ಹೂವು ಒಂದು ಬಿಡಿಗಾಸು ಮಾತ್ರ - ಅದೇ ಅವಳ ಜೀವನಾಧಾರ. 

At Keukenhof
ಹೂ ಗಿಡಗಳನ್ನು ಪ್ರೀತಿಸೋಣ, ಬೆಳೆಸೋಣ - ಪ್ರಕೃತಿಯನ್ನು ಆರಾಧಿಸೋಣ. ಮನೆ ಮನೆಗಳಲ್ಲಿ ಹೂವಿನ ಗಿಡಗಳು ಕ್ಷೀಣಿಸುತ್ತಿರುವ ಈ ಕಾಲಘಟ್ಟದಲ್ಲಿ ಲಾಲ್ ಬಾಗ್ ನಂತಹ ಹೂದೋಟಗಳು ಪುಷ್ಪಪ್ರಿಯರಿಗೆ ಮುದ ನೀಡುತ್ತವೆ. ನಾನು ಕಳೆದ ವರ್ಷ ಯುರೋಪ್ ನ ನೆದರ್ಲ್ಯಾಂಡ್ ನಲ್ಲಿರುವ ಜಗತ್ತಿನ ಅತಿ ದೊಡ್ಡ ಹೂದೋಟ - ಕೊಕೇನ್ ಹಾಫ್ (Keukenhof)ಗೆ ಭೇಟಿ ನೀಡಿದ್ದೆ. ಸುಮಾರು ೮೦ ಎಕರೆ ಇರುವ ಸ್ವರ್ಗ ಅದು, ಒಮ್ಮೆ ಒಳಹೊಕ್ಕರೆ ಹೊರಬರುವ ಮನಸ್ಸೇ ಆಗುವುದಿಲ್ಲ! ಹೂವುಗಳ ಆಕರ್ಷಣೆಯೇ ಹಾಗೆ. ನಮ್ಮ ಲಾಲ್ ಬಾಗ್ ಕೂಡ ಅನೇಕ ರೀತಿಯ ಹೂವುಗಳಿಂದ ಕಂಗೊಳಿಸುತ್ತಿದೆ - ಸಮಯ ಮಾಡಿಕೊಂಡು ಭೇಟಿ ನೀಡುವುದು ಉತ್ತಮ. ಲಾಲ್ ಬಾಗ್ ನ ಪುಷ್ಪಜಾತ ಕಲಾಕೃತಿಗಳ ಹಿಂದಿರುವ ಕೈಗಳಿಗೆ ಮೆಚ್ಚುಗೆ ಸಲ್ಲಿಸುತ್ತಾ ಇಲ್ಲಿಗೆ ವಿರಮಿಸುತ್ತೇನೆ.

ಕೊನೆಯ ಹನಿ - ಗುಲಾಬಿ ಗಿಡದಲ್ಲಿ ಹೂವಿದ್ದಾಗ ಯಾರೂ ಮುಳ್ಳನ್ನು ನೋಡುವುದಿಲ್ಲ, ಹೀಗೆ ಒಂದು ಗುಲಾಬಿ ತನ್ನ ಗಿಡದ ಎಲ್ಲ ಮುಳ್ಳುಗಳನ್ನು ಮುಚ್ಚಿಡುತ್ತದೆ. ಸೃಷ್ಟಿಯ ಈ ಸೂಕ್ಷ್ಮತೆಯನ್ನು ಅರ್ಥೈಸಿಕೊಳ್ಳೋಣ - ಭಾರತಮಾತೆಯ ಪದತಲದಲ್ಲಿ ನಾವೊಂದು ಗುಲಾಬಿಯಾಗೋಣ.

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಶ್ರಾವಣ - ಪೂರ್ಣಿಮಾ.
೧೫-ಆಗಸ್ಟ್-೨೦೧೯, ಗುರುವಾರ.
ಬೆಂಗಳೂರು.

Tuesday 16 July 2019

ಕಾಲನ ಕರೆಗೆ ಕೊನೆಗೂ ಓಗೊಟ್ಟ ನಮ್ಮ ಶ್ರೀನಿವಾಸ ಆಚಾರ್ಯ

ಕಾಲನ ಕರೆಗೆ ಕೊನೆಗೂ ಓಗೊಟ್ಟ ನಮ್ಮ ಶ್ರೀನಿವಾಸ ಆಚಾರ್ಯ 

ಭಾರತೀಯ ಇತಿಹಾಸ ಸಂಕಲನಾ ಸಮಿತಿಯ ರಾಜ್ಯ ಸಂಚಾಲಕರಾಗಿದ್ದ ಶ್ರೀಯುತ ಶ್ರೀನಿವಾಸ ರಾವ್ (ನಮ್ಮ ನೆಚ್ಚಿನ ಶ್ರೀನಿವಾಸ ಆಚಾರ್ಯ) ನಿನ್ನೆ ಇತಿಹಾಸ ಸೇರಿದ್ದಾರೆ. ಇತಿಹಾಸದ ಬಗ್ಗೆ ಅತೀವ ಆಸಕ್ತಿ ಹೊಂದಿ ನನ್ನಂತಹ ಅನೇಕರಿಗೆ ಭಾರತೀಯ ಇತಿಹಾಸದಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿ ಕೊನೆಗೆ ಇತಿಹಾಸ ಸೇರಿದ ವ್ಯಕ್ತಿ ಅವರು. ನಮಗೆ ಗುರುಕುಲದಲ್ಲಿ ಅವರು ಹೇಳುತ್ತಿದ್ದ ಇತಿಹಾಸ ಪಾಠ ಇಂದೂ ನೆನಪಿದೆ. ಶಿವಾಜಿ, ಚಾಣಕ್ಯ, ಆಜಾದ್ ಇತ್ಯಾದಿ ಕಥೆಗಳನ್ನು ಧಾರಾವಾಹಿಯಂತೆ ಕಣ್ಣಿಗೆ ಕಟ್ಟುವ ಹಾಗೆ ಅನೇಕ ದಿನಗಳವರೆಗೆ ಹೇಳುತ್ತಿದ್ದರು. ನಿನ್ನೆ ಬಂದೆರಗಿದ ಅವರ ಅಕಾಲಿಕ ನಿಧನ ವಾರ್ತೆ ನನ್ನಂತಹ ಅನೇಕ ಶಿಷ್ಯಂದಿರಿಗೆ ಆಘಾತವನ್ನುಂಟುಮಾಡಿದೆ.

ಶ್ರೀನಿವಾಸ ಆಚಾರ್ಯರದ್ದು ಬಹುಮುಖ ವ್ಯಕ್ತಿತ್ವ. ಇತಿಹಾಸವಲ್ಲದೆ ಕುಸ್ತಿ, ಮಲ್ಲಯುದ್ಧ ಹೀಗೆ ಅನೇಕ ಶಾರೀರಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದರು. ತುಂಗೆಯ ತಟದಲ್ಲಿ ಮರಳು ರಾಶಿಯ ಮೇಲೆ ಹನುಮಾನ್ ಚಡ್ಡಿ ಹಾಕಿ ಅವರು ನಮಗೆ ಹೇಳಿಕೊಡುತ್ತಿದ್ದ ಕುಸ್ತಿ ಇನ್ನೂ ನೆನಪಿದೆ. ನನಗೆ ನೆನಪಿರುವಂತೆ ಅವರ ಮಾರ್ಗದರ್ಶನದಲ್ಲಿ ನಾನು ಮತ್ತು ನನ್ನ ಸ್ನೇಹಿತ ಕೇಶವ ಇಬ್ಬರೂ ಹರಿಹರಪುರದಲ್ಲಿ ಕುಸ್ತಿ ಪ್ರದರ್ಶನ ಕೂಡಾ ಮಾಡಿದ್ದೇವೆ. ಅಷ್ಟೇ ಅಲ್ಲದೆ ನನ್ನ ಮೊದಲನೇ ಪ್ರಾಜೆಕ್ಟ್ ವರ್ಕ್ "ಗ್ರಾಮೀಣ ಭಾರತದ ಅಧ್ಯಯನ" ಅವರ ಮಾರ್ಗದರ್ಶನದಲ್ಲಿಯೇ ಆಗಿದೆ. ನನ್ನ ಜೊತೆಗೆ ನನ್ನ ಸಹಾಧ್ಯಾಯಿಗಳಿಗೆ ವನವಾಸಿ ಹಾಗೂ ನಗರ ಭಾರತದ ಅಧ್ಯಯನದ ಪ್ರಾಜೆಕ್ಟ್ ವರ್ಕ್  ಮಾಡಿಸಿದ್ದರು. ಪ್ರಜ್ಞಾ, ಪ್ರತಿಭಾ ಗಣದಲ್ಲಿರುವಾಗಲೇ (ಗುರುಕುಲದಲ್ಲಿ ೭, ೮ ನೇ ತರಗತಿ) ಇತಿಹಾಸದ M.A ಪುಸ್ತಕಗಳನ್ನು ಓದುತ್ತಿದ್ದೆವು ಅಂದರೆ ಅದರಲ್ಲಿ ಶ್ರೀನಿವಾಸ ಆಚಾರ್ಯರ ಪಾತ್ರ ಬಹಳಷ್ಟಿದೆ. ನಾನು ಅವರ ಮಾರ್ಗ ದರ್ಶನದಲ್ಲಿ ಧೃತಿ ಗಣದಲ್ಲಿದ್ದಾಗ (೯ ನೇ ತರಗತಿ) ಸ್ಥಳೀಯ ಪತ್ರಿಕೆಯ ವಿಶೇಷ ಸಂಚಿಕೆಗೆ "ಪ್ರಾಚೀನ ಭಾರತೀಯರ ಸಾಧನೆಗಳು" ಎಂಬ ಶೀರ್ಷಿಕೆಯಡಿ ಲೇಖನವನ್ನು ಕೂಡಾ ಬರೆದಿದ್ದೇನೆ. ಪ್ರಕಟಿತವಾದ ನನ್ನ ಮೊದಲ ಲೇಖನ ಅದು. ಇಂದೂ ಅಭ್ಯಸಿಸುತ್ತಿರುವ ನಿರಂತರ ಬರವಣಿಗೆಗೆ ಅವರೂ ಸ್ಫೂರ್ತಿಯಾಗಿದ್ದಾರೆ. ಶ್ರೀ ವಿದ್ಯಾನಂದ ಶೆಣೈ ಅವರಂತೆ 'ಭಾರತ ದರ್ಶನ' ಕಾರ್ಯಕ್ರಮವನ್ನು ಸಂಸ್ಕೃತದಲ್ಲಿ ಮಾಡಿಸಬೇಕೆಂದು ಅವರೂ ಇಚ್ಚಿಸಿದ್ದರು - ಅದು ಇನ್ನೂ ಸಾಧ್ಯವಾಗಿಲ್ಲದ್ದಕ್ಕೆ ಬೇಸರವಿದೆ.

ಕೇವಲ ಪಠ್ಯ ವಿಷಯಗಳಲ್ಲದೇ ಗುರುಕುಲದಲ್ಲಿ ಮಕ್ಕಳೊಂದಿಗೆ ಇಡ್ಲಿ ತಿನ್ನುವ, ಪಾಯಸ ಸುರಿಯುವ ಸ್ಪರ್ಧೆಗಳಲ್ಲಿ ಅವರೂ 'ಸಾಥ್' ಕೊಡುತ್ತಿದ್ದರು. ಅವರ ಜೊತೆ ಗೆಲ್ಲುವುದು ಕಷ್ಟವಾಗಿತ್ತಾದರೂ ಗೆದ್ದ ಅನುಭವವಿದೆ ನನಗೆ..! ಅನೌಪಚಾರಿಕವಾಗಿ ನಮ್ಮ ಹರಟೆಗಳು ಗಂಟೆಗಟ್ಟಲೆ ನೆಡೆಯುತ್ತಿದ್ದವು. ಸಂಪರ್ಕ, ಪ್ರವಾಸ ಪ್ರಿಯರಾಗಿದ್ದ ಅವರು ನನ್ನನ್ನು ಒಮ್ಮೆ ಕೊಪ್ಪದಲ್ಲಿರುವ ಕ್ರೈಸ್ತ ಪಾದ್ರಿಯವರ ಮನೆಗೆ ಸಂಪರ್ಕಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನೆಡೆದ ಕ್ರೈಸ್ತ-ಹಿಂದೂ ಧರ್ಮದ ಬಗೆಗಿನ ಚರ್ಚೆ ಇಂದೂ ನನಗೆ ನೆನಪಿದೆ.

ಒಟ್ಟಿನಲ್ಲಿ ನಾವಿದ್ದ ಆರೂ ವರ್ಷ ಅವರು ಗುರುಕುಲದಲ್ಲಿ ಆಚಾರ್ಯರಾಗಿಯೇ ಇದ್ದರು. ನಂತರದಲ್ಲಿ ಭಾರತೀಯ ಇತಿಹಾಸ ಸಂಕಲನಾ ಸಮಿತಿಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದರು. ಗುರುಕುಲ ಬಿಟ್ಟ ನಂತರ ನನ್ನ ಮತ್ತು ಶ್ರೀನಿವಾಸ ಆಚಾರ್ಯರ ಸಂಪರ್ಕ ಕಡಿಮೆಯಾಗಿತ್ತಾದರೂ, ಪೂರ್ವ ಛತ್ರ ಸಭೆಗಳಲ್ಲಿ (Alumni meet) ಭೇಟಿಯಾದಾಗ ನಮ್ಮನ್ನು ಬಹಳ ಪ್ರೀತಿಯಿಂದ ವಿಚಾರಿಸುತ್ತಿದ್ದರು. ನಮ್ಮ ನೆಚ್ಚಿನ ಆಚಾರ್ಯರ ಅಕಾಲಿಕ ನಿಧನ ಬಹಳ ದುಃಖ ತಂದಿದೆ. ಅವರ ಕುಟುಂಬಕ್ಕೆ, ಅಭಿಮಾನಿ ಬಳಗಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ. ಆಚಾರ್ಯರ ಆತ್ಮಕ್ಕೆ ಶಾಂತಿ, ಸದ್ಗತಿ ಸಿಗಲಿ ಎಂದು ಈ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ.

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಆಷಾಢ-ಪೂರ್ಣಿಮೆ.
೧೬-೦೭-೨೦೧೯, ಬೆಂಗಳೂರು. 

Sunday 5 May 2019

Words Laugh Day - 2019

ವಿಶ್ವ ನಗೆ ದಿನ - ಹಸನ್ಮುಖಿ ಸದಾ ಸುಖಿ.

ಇಂದು ವಿಶ್ವ ನಗೆ ದಿನ. ಮೇ ತಿಂಗಳ ಮೊದಲ ಭಾನುವಾರವನ್ನು ಜಗತ್ತು "ನಗೆ ದಿನ"ವನ್ನಾಗಿ ಆಚರಿಸುತ್ತದೆ. ಇದು ನಗುವಿನ ಮಹತ್ವವನ್ನು ತಿಳಿಸುತ್ತದೆ. 'ನಗು' ಮನಸ್ಸು ಹಗುರವಾಗಿದ್ದಾಗ ತನ್ನಿಂದ ತಾನೇ ಹೊರ ಹೊಮ್ಮುವ ಭಾವ, ಮನಸ್ಸಿನ ಒಳಗಿನ ಸಂತೋಷವನ್ನು ಮುಖದ ಮೇಲೆ ಹೊರ ಜಗತ್ತಿಗೆ ವ್ಯಕ್ತ ಪಡಿಸುವ ಪ್ರಕ್ರಿಯೆಯೇ 'ನಗು'. ಈ ನಗು ದೊಡ್ಡವರನ್ನು ಚಿಕ್ಕ ಮಗುವನ್ನಾಗಿ ಪರಿವರ್ತಿಸಬಲ್ಲದು. ನಿಷ್ಕಳಂಕವಾದ ನಗುವನ್ನು ನಾವು ಚಿಕ್ಕ ಮಕ್ಕಳಲ್ಲಿ ನೋಡುತ್ತೇವೆ. ಕಪಟವಿಲ್ಲದ ಮಕ್ಕಳ ಈ ನಗು ಎಂತಹವರನ್ನಾದರೂ ಮುಗ್ಧರನ್ನಾಗಿಸುತ್ತದೆ. ಇಂತಹ ಮಕ್ಕಳ ನಗುವನ್ನು ನೋಡಿಯೇ ಕವಿ ಡಿಂಡಿಮ "ಕಮಲೇ ಕಾಮಲೋತ್ಪತ್ತಿ:"- ಒಂದು ಕಮಲದಲ್ಲಿ ಇನ್ನೊಂದು ಕಮಲಹುಟ್ಟುತ್ತದೆ ಎಂದು ಮಕ್ಕಳ ಮುಖಾರವಿಂದವನ್ನು ವರ್ಣಿಸಿರುವುದು. ಮನಸ್ಸು ಅತ್ಯಂತ ಸಮಾಧಾನವಾಗಿದ್ದಾಗ ಮಾತ್ರ ವ್ಯಕ್ತವಾಗುವ ಭಾವ - ನಗು. ನಾವೆಷ್ಟು ನಗುತ್ತೇವೆ ಅನ್ನುವುದು ನಮ್ಮ ಮನಸ್ಸಿನ ಲಯವನ್ನು ತಿಳಿಸುತ್ತದೆ.

ನಗು ಕೇವಲ ಒಂದು ಬಹಿರ್ಮುಖವಾದ ಕ್ರಿಯೆಯಾಗದೆ ಅಂತರಂಗದ ಅನುಭೂತಿಯಾಗಿದೆ. ಈ ಅನುಭೂತಿಯನ್ನು ಪಡೆಯಲು ನಾವು ನಮ್ಮ ಜೀವನಕ್ರಮ, ಚಿಂತನಾವಿಧಿಗಳನ್ನು 'ಟ್ಯೂನ್' ಮಾಡಿಕೊಳ್ಳಬೇಕಾಗುತ್ತದೆ. ಇಂದಿನ ಧಾವಂತ ಜೀವನ ಪದ್ದತಿಯಲ್ಲಿ ನಗುವುದು ಹಾಗೆಯೇ ನಗಿಸುವುದು ಸುಲಭದ ಕೆಲಸಗಳಲ್ಲ. ಅತ್ಯಂತ ಸ್ವಾಭಾವಿಕವಾಗಿ ಹೊರಹೊಮ್ಮಬೇಕಾದ ನಗುವನ್ನು ನಮಗೆ ಪುನಃ ನೆನಪಿಸಲು ತರಬೇತಿಗಳ, ಶಿಬಿರಗಳ ಅವಶ್ಯಕತೆ ಬಂದಿರುವುದು ಒಂದು ವಿಪರ್ಯಾಸವೇ ಸರಿ.

ನಮ್ಮಲ್ಲಿ ಅನೇಕರು ಚಿಂತೆ ಮಾಡುತ್ತಲೇ ಕೊನೆಗೆ ಚಿತೆಯನ್ನೇರುತ್ತೇವೆ. ಚಿಂತೆ ನಮ್ಮನ್ನು 'ಶೂನ್ಯ ಭಾವ'ದೆಡೆಗೆ ದೂಡುತ್ತದೆ. ಮಕ್ಕಳಿಗೆ ಪಠ್ಯ-ಪುಸ್ತಕ, ಪರೀಕ್ಷೆಗಳ ಚಿಂತೆ, ಶಿಕ್ಷಕರಿಗೆ ಶಾಲಾ-ಕಾಲೇಜುಗಳ ಫಲಿತಾಂಶದ್ದೇ ಚಿಂತೆ, ಇನ್ನು ಪೋಷಕರಿಗೆ ಮಕ್ಕಳ ೧೦೦ ವರ್ಷದ ಜೀವನಕ್ಕಿಂತ ಅವರು ೧೦೦% ಪಡೆಯುವುದೇ ದೊಡ್ಡ ಚಿಂತೆ..!!ಉದ್ಯೋಗಿಗಳಿಗೆ ವಾರ್ಷಿಕ ಬಡ್ತಿಯದ್ದೇ ಚಿಂತೆ, ಗಂಡನಿಗೆ ಹೆಂಡತಿಯ ಚಿಂತೆ, ಹೆಂಡತಿಗೆ ಗಂಡನದ್ದೇ ಚಿಂತೆ. ಗಂಡ-ಹೆಂಡತಿ ಇಬ್ಬರಿಗೂ ಮಕ್ಕಳ ಚಿಂತೆ. ಹೀಗೆ ಖಂತೆ ಖಂತೆ ಚಿಂತೆಗಳ ಸಂತೆಯಲ್ಲಿ ನಾವಿದ್ದೇವೆ. ಹಾಗಾಗಿ ಮನಸ್ಸು ಭಾರವಾಗಿ ನಗು ಅನುಭವಕ್ಕೆ ಬಾರದಾಗಿದೆ. ನಾವು ಅನಾವಶ್ಯಕ ಚಿಂತೆಗಳನ್ನು ದೂರ ಮಾಡೋಣ. ದಿನಗಳನ್ನು ಮುಂದೂಡುವ ಬದಲು, ಪ್ರತಿ ಕ್ಷಣವನ್ನು ಅನುಭವಿಸೋಣ. ಆಧುನಿಕ ಸಂಶೋಧನೆಗಳ ಪ್ರಕಾರ 'ನಗು' ಒಂದು ಔಷಧವಾಗಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಾಲ ಗರ್ಭದಲ್ಲಿ ಅಡಕವಾಗಿದೆ ಎಂದರಿತು "ಕಾಲಾಯ ತಸ್ಮೈ ನಮಃ" ಎನ್ನೋಣ. ಮನಸ್ಸನ್ನು ತಿಳಿಯಾಗಿಡಲು ಪ್ರಯತ್ನಿಸೋಣ. ತಿಳಿಯಾದ ಮನಸ್ಸಿನ ವ್ಯಕ್ತ ರೂಪವೇ ನಗು. ಮುಖದ ಮೇಲಿನ ಮಂದಹಾಸ ನಮ್ಮ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ ಎಂಬುದು ಗಮನೀಯ ಅಂಶ.

ಇನ್ನೂಅನೇಕರಿಗೆ ಹಾಸ್ಯ ಮತ್ತು ಅಪಹಾಸ್ಯಗಳ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ಹಾಸ್ಯ ಮಾಡುವ ಭರದಲ್ಲಿ ಅಪಹಾಸ್ಯ ಮಾಡುತ್ತಾರೆ. ಇನ್ನೊಬ್ಬರ ದೌರ್ಬಲ್ಯಗಳನ್ನೇ ವಿಷಯ ಮಾಡಿ ನಗುವುದು ಅಪಹಾಸ್ಯವಾಗುತ್ತದೆ. ಇತರರಿಗೆ ನೋವಾಗುವಂತೆ ನಗುವುದೇ ಲೇವಡಿ-ಕುಹಕವಾಗುತ್ತದೆ. ನಮ್ಮ ನಗು ಇತರರ ಮನಸ್ಸನ್ನು ಅರಳಿಸಬೇಕು, ಕೆರಳಿಸಬಾರದು - ನೋಯಿಸಬಾರದು. ನಗುವುದು - ನಗಿಸುವುದು ಒಂದು ಕಲೆ. ಇದನ್ನು ಕರಗತ ಮಾಡಿಕೊಳ್ಳಬೇಕು. ನವಿರಾದ ಹಾಸ್ಯಪ್ರಜ್ಞೆ ಸ್ನೇಹಿತರನ್ನು ಸಂಪಾದಿಸುತ್ತದೆ, ಸಂಬಂಧಗಳನ್ನು ಗಟ್ಟಿ ಮಾಡುತ್ತದೆ. ಆದರೆ ಅಪಹಾಸ್ಯ ಸಂಬಂಧಗಳನ್ನು ಶಾಶ್ವತವಾಗಿ ದೂರ ಮಾಡುತ್ತದೆ. ಹೀಗೆ ನಗುವಿನ ಲಯವನ್ನು ಅರಿತುಕೊಳ್ಳುವುದೇ 'ಹಾಸ್ಯಪ್ರಜ್ಞೆ'. ಇಂತಹ ತಿಳಿಯಾದ ಹಾಸ್ಯಪ್ರಜ್ಞೆ ನಮ್ಮದಾಗಬೇಕು.


ಕೊನೆಯ ಹನಿ: Smily ಗಳನ್ನು Whatsapp ನಿಂದ ಹೊರತಂದು ನಮ್ಮ ಮುಖದಲ್ಲಿ ವ್ಯಕ್ತಪಡಿಸೋಣ. ನಗೋಣ-ನಗಿಸೋಣ, ಹಸನ್ಮುಖಿಗಳಾಗೋಣ - ಸದಾಸುಖಿಗಳಾಗೋಣ. ಕೊನೆಯಲ್ಲಿ ಡಿವಿಜಿ ಯವರ ಮಂಕುತಿಮ್ಮನ ಕಗ್ಗದ ಈ ತುಣುಕನ್ನು ಮೆಲುಕು ಹಾಕುತ್ತಾ ನಗುವಿನ ಮರ್ಮವನ್ನು ಅರಿತುಕೊಳ್ಳೋಣ.


ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ |
ನಗುವ ಕೇಳುತ ನಗುವುದತಿಶಯದ ಧರ್ಮ ||
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ|
ಮಿಗೆ ನೀನು ಬೇಡಿಕೊಳೋ  - ಮಂಕುತಿಮ್ಮ ||

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ವೈಶಾಖ-ಕೃಷ್ಣ-ಪಂಚಮಿ.
೦೫-ಮೇ-೨೦೧೯, ಭಾನುವಾರ
ಬೆಂಗಳೂರು.

Sunday 3 March 2019

Nation and National Commitment

ದೇಶದ ಬಗೆಗಿನ ಬಧ್ಧತೆ ಮರೆತ ಎಡಬಿಡಂಗಿಗಳಿಗೆ ಏನೆನ್ನಬೇಕು?

ಳೆದ ೧೫ ದಿನಗಳಿಂದ ಮನಸ್ಸು ಬಹಳ ಘಾಸಿಗೊಂಡಿದೆಫೆ.೧೪ ಭಾರತದ ಮಟ್ಟಿಗೆ ಕರಾಳ ದಿನ.
ನಮ್ಮ ದೇಶದ ೪೪ ಸೈನಿಕರನ್ನು ದುಷ್ಟಶಕ್ತಿಗಳು  ಹತ್ಯೆಗೈದಿದ್ದು ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತುಭಯೋತ್ಪಾದನೆ - ಅದು ಕೇವಲ ಭಾರತಕ್ಕಲ್ಲಮಾನವ ಜಗತ್ತಿಗೆ ಅಂಟಿದಶಾಪ೨೨ ವರ್ಷದ ಯುವಕನೊಬ್ಬ ಸ್ಫೋಟಕಗಳನ್ನು ಬಳಸಿ ೪೪ ಜನರನ್ನು ಹತ್ಯೆಗಯ್ಯುತ್ತಾನೆಂದರೆ  ವಿಕೃತ ಮನಸ್ಸು ಹಾಗೂ ಅದರ ಹಿಂದಿರುವ ಸಂಘಟನೆಗಳ ಕ್ರೌರ್ಯ ಎಂಥಾದ್ದಿರಬಹುದುಇಂತಹ ಶಕ್ತಿಗಳನ್ನು ನಿಶ್ಶಕ್ತಿಗೊಳಿಸುವುದು  ಮಾನವ ಸಮಾಜಕ್ಕೆ ಅನಿವಾರ್ಯ.

ಫುಲ್ವಾಮಾದಲ್ಲಿ ನೆಡೆದ ಭೀಕರ ಸ್ಫೋಟ 
ಸರಣಿಯನ್ನೊಮ್ಮೆ ನೆನಪಿಸಿಕೊಳ್ಳೋಣಫೆ೧೪ ಫುಲ್ವಾಮಾದಲ್ಲಿ ಭಯೋತ್ಪಾದಕನ ದಾಳಿಅದಾದ ನಂತರ ಪಾಕಿಸ್ತಾನದ ಮೇಲೆ ನಿಯಂತ್ರಣ ಹೇರಲು ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳುನಂತರ ಭಾರತೀಯ ವಾಯುಸೇನೆಯಿಂದ ವಿಷ ಜಂತುಗಳ ಹುತ್ತಕ್ಕೆ ಬಾಂಬ್ ದಾಳಿಇದರಿಂದ ಸಿಟ್ಟುಗೊಂಡ ಪಾಕ್ನಿಂದ ಭಾರತದ ಮೇಲೆ ದಾಳಿಯ ಯತ್ನಭಾರತದಿಂದ ಅದನ್ನು ಹಿಮ್ಮೆಟ್ಟಿಸಲು ಪ್ರತಿ ದಾಳಿ ಹಂತದಲ್ಲಿ ಭಾರತದ ವಾಯುಸೇನಾಧಿಕಾರಿಯನ್ನು ಪಾಕಿಸ್ತಾನ ಸೇನೆ ಸೆರೆಹಿಡಿಯುವುದು ಮತ್ತು ಕೊನೆಯಲ್ಲಿ ಅವರನ್ನು ಜಿನೇವಾ ಒಪ್ಪಂದದಂತೆ ಭಾರತಕ್ಕೆ ಪುನಃ ಕಳುಹಿಸಿಕೊಡುವುದು - ಇಷ್ಟೆಲ್ಲಾ ಘಟನೆಗಳು  ೧೫ ದಿನಗಳಲ್ಲಿ ಘಟಿಸಿದವು.

ಪಾಕಿಸ್ತಾನ ಬಂಧಿಸಿದ್ದ ಭಾರತೀಯ
ವಾಯುಸೇನಾಧಿಕಾರಿ - ಅಭಿನಂದನ್ ವರ್ತಮಾನ್
ನಮ್ಮ ದೇಶಿಗರು ಇಂತಹ ಸನ್ನಿವೇಶಗಳಿಗೆ ಸ್ಪಂದಿಸುವಷ್ಟು
ಬೆಳೆದಿದ್ದಾರೆಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್ವಾಟ್ಸಾಪ್ಟ್ವಿಟರ್ ಇತ್ಯಾದಿಗಳು  ಸ್ಪಂದನೆಗಳಿಗೆ ಪರಿಣಾಮಕಾರಿಯಾದ ಮಾಧ್ಯಮಗಳಾಗಿವೆಅನೇಕರು ಭಯೋತ್ಪಾದನೆಯನ್ನು ಕಿತ್ತೊಗೆಯಬೇಕೆಂದೂಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂದೂ ಅಭಿಪ್ರಾಯಪಟ್ಟರೆಇನ್ನೂ ಅನೇಕರು ಬಂಧಿಯಾಗಿರುವ ಭಾರತೀಯ ಯೋಧ ಸುರಕ್ಷಿತವಾಗಿ ಹಿಂತಿರುಗಳೆಂದೂ ಹಾರೈಸಿದ್ದಾರೆಅತ್ತ ಪಾಕಿಸ್ತಾನದ ಟ್ವೀಟಿಗರು ಭಾರತದ ಸೇನೆ
ಉಧ್ಧಟತನ ತೋರಿದೆ ಎಂದು ಅವಲತ್ತುಕೊಂಡಿದ್ದಾರೆಹಾಗೆಯೇ ಕೆಲವರು ಭಾರತೀಯ ಯೋಧನನ್ನು ಗೌರವಯುತವಾಗಿ ನೆಡೆಸಿಕೊಂಡು ಹಿಂದಿರುಗಿಸಬೇಕೆಂದೂಇನ್ನೂ ಕೆಲವರು ಹಿಂದಿರುಗಿಸಬಾರದೆಂದೂ ಪಾಕ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಇನ್ನು ಜಿನೇವಾ ಒಪ್ಪಂದದಂತೆ ನಮ್ಮ ಯೋಧನನ್ನುಹಿಂದಿರುಗಿಸಿದ ಮೇಲೆ ಭಾರತೀಯರು ಹರ್ಷವನ್ನು ವ್ಯಕ್ತಪಡಿಸಿದ್ದಾರೆಹೀಗೆ ಅನೇಕ ರೀತಿಯ ಅಭಿಪ್ರಾಯಗಳಿಗೆ  ಸಾಮಾಜಿಕ ಮಾಧ್ಯಮಗಳು ಸಾಕ್ಷಿಯಾದವು.

ನಮ್ಮ ದೇಶದ ಮೇಲೆ ಹೊರಗಿನವರ ಆಕ್ರಮಣ ಒಂದುಕಡೆಯಾದರೆಒಳಗಿನವರ ಅತಿರೇಕಗಳು ನಮ್ಮನ್ನು ಇನ್ನೂ ಚಿಂತೆಗೀಡುಮಾಡಿದೆ ಒಟ್ಟಾರೆ ಸನ್ನಿವೇಶ ಅನೇಕ ವ್ಯಕ್ತಿಗಳರಾಜಕಾರಣಿಗಳರಾಜಕೀಯ ಪಕ್ಷಗಳಸಾಮಾಜಿಕ ಕಾರ್ಯಕರ್ತರೆನಿಸಿಕೊಂಡವರಸಾಹಿತಿಗಳಪತ್ರಕರ್ತರ ಹೀಗೆ ಅನೇಕರ "ರಾಷ್ಟ್ರೀಯ ಬಧ್ಧತೆ"ಯನ್ನು ತೋರಿಸಿಕೊಟ್ಟಿದೆಇದು ಇವರುಗಳ ಬಣ್ಣವನ್ನು ಬಯಲು ಮಾಡಿ ಇವರನ್ನು ಬೆತ್ತಲು ಮಾಡಿದೆಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ಇವರುಗಳು
ತಾವೇನು ಮಾಡುತ್ತಿದ್ದೇವೆ ಎಂಬುದನ್ನೇ ಮರೆತಂತಿದೆಇದು ಕೇವಲ ಚುನಾವಣಾ ತಂತ್ರವೆಂದು ಕೆಲವು ರಾಜಕೀಯ ಪಕ್ಷಗಳುರಾಜಕಾರಣಿಗಳುಪತ್ರಕರ್ತರು ಭಯೋತ್ಪಾದನೆಯ ವಿರುಧ್ಧ ನೆಡೆದ ದಾಳಿಯ ಮೇಲೆ ತಣ್ಣೀರೆರೆಚಿದ್ದಾರೆಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ದಾಳಿಯ ಕುರಿತಾದ ಸಾಕ್ಷ್ಯಗಳನ್ನು ಬಹಿರಂಗಪಡಿಸಬೇಕೆಂದು  ತಮ್ಮ ಬೇಜವಾಬ್ದಾರಿಯುತವಾಗಿ ಒತ್ತಾಯಿಸಿದ್ದಾರೆಇತ್ತ ಸುದ್ದಿ ಮಾಧ್ಯಮಗಳು ವೀರ ಯೋಧನ ವ್ಯಯಕ್ತಿಕ ಮಾಹಿತಿಯನ್ನು ಫೋಟೋ ಸಹಿತ ಬಟಾ ಬಯಲು ಮಾಡಿರುವುದು - ಪಾಕಿಸ್ತಾನದವರೂ ಕೂಡಾ ನಮ್ಮತ್ತ ನೋಡಿ ನಗುವಂತೆ ಮಾಡಿದೆ.

ಹಾಗೆ ನೋಡಿದರೆ ಪಾಕಿಸ್ತಾನಕ್ಕೆ ನಮ್ಮ ಯೋಧನನ್ನು ಬಿಡುಗಡೆಗೊಳಿಸುವ ಹೊರತು ಬೇರೆ ಆಯ್ಕೆಗಳೇ ಇರಲಿಲ್ಲಹಾಗಾಗಿ  ದೇಶದ  ನೆಡೆಯನ್ನು ನಾವು ಶಾಂತಿ ಸ್ಥಾಪನೆಯ ಬೀಜವೆಂದೇನೂ ಪರಿಗಣಿಸಬೇಕಿಲ್ಲಇದರ ಪ್ರಾಥಮಿಕ ಅರಿವೂ ಇಲ್ಲದೇಮೋದಿಯವರನ್ನು ವಿರೋಧಿಸುವ ಸಲುವಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನನ್ನ ಹೊಗಳಿರುವುದುಆತನ ನೆಡೆಯನ್ನು ಶಾಂತಿಮಾರ್ಗವೆಂದು ನಮ್ಮ ಕೆಲವು ಬುದ್ದಿಜೀವಿ(??)ಗಳುಪತ್ರಕರ್ತರು ಹೇಳಿರುವುದು ನಮ್ಮ ದೇಶದ ದುರ್ಧೈವವೇ ಸರಿನಮ್ಮ ಕೆಲವು ಎಡ ಬಿಡಂಗಿ ರಾಜಕಾರಣಿಗಳು ಇದೇ ಸನ್ನಿವೇಶವನ್ನು ರಾಜಕೀಯದ ತಕ್ಕಡಿಯಲ್ಲಿ ಹಾಕಿ ತೂಗಿರುವುದು ಅತ್ಯಂತ ಕೆಳಮಟ್ಟದ ಬೆಳವಣಿಗೆಯಾಗಿದೆ೩೦೦ ಲೋಕಸಭಾ ಸ್ಥಾನಗಳಿಗಾಗಿ  ದಾಳಿ ನೆಡೆದಿದೆ ಎಂಬ ಪ್ರಜ್ಞಾ ರಹಿತ ದೆಹಲಿ ಮುಖ್ಯಮಂತ್ರಿಯ ಹೇಳಿಕೆ ಪಾಕ್ ಸಂಸತ್ತಿನಲ್ಲೂ ಚರ್ಚೆಯ ವಿಷಯವಾಗುತ್ತದೆಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೇನಿರಲು ಸಾಧ್ಯ?

ಇಡೀ ಪ್ರಕರಣದಲ್ಲಿ ಭಾರತ ರಾಜತಾಂತ್ರಿಕವಾಗಿ ಗೆದ್ದಿದೆಅಂತರಾಷ್ಟ್ರೀಯ ಗಡಿರೇಖೆಯನ್ನು ದಾಟಿ ದಾಳಿ ಮಾಡಿರುವುದು ನಮ್ಮ ಭಾರತ ಸರ್ಕಾರದ ಗಟ್ಟಿ ನಿರ್ಧಾರವೇ ಸರಿ ನಿರ್ಧಾರಕ್ಕಾಗಿ ನಾನು ಮೋದಿಯವರನ್ನು ಬೆಂಬಲಿಸುತ್ತೇನೆಒಟ್ಟಾರೆ  ಘಟನಾವಳಿಗಳ ಧನಾತ್ಮಕ ಪರಿಣಾಮವನ್ನು ಮೋದಿಯವರಿಗೆ ಕೊಡಬಾರದೆಂಬುದೇ ಮೋದಿ ವಿರೋಧಿಗಳ ಏಕಮೇವ ಧ್ಯೇಯವಾಗಿದೆಆದರೆ ಮನೆಯೇ ಹೊತ್ತಿ ಉರಿಯುತ್ತಿರುವಾಗ ಮನೆಯ ಯಜಮಾನನಿಗೆ ಹೆಗಲು ಕೊಟ್ಟು ನಿಲ್ಲುವುದು ನಮ್ಮ ಜವಾಬ್ದಾರಿಆಢಳಿತ ಪಕ್ಷವನ್ನು ವಿರೋಧಿಸುವುದುಮೋದಿಯವರನ್ನು ಹೊಗಳುವುದು - ತೆಗಳುವುದುಪುಷ್ಟೀಕರಿಸುವುದು - ವಿರೋಧಿಸುವುದು ಅವರವರ ಆಯ್ಕೆಆದರೆ ಇಂತಹ ಸನ್ನಿವೇಶಗಳನ್ನು ರಾಜಕೀಯದ ವಕ್ರದೃಷ್ಟಿಯಿಂದ ನೋಡಿ, "ಬಧ್ಧತೆ"ಯನ್ನು ಮರೆಯುವುದು - ರಾಷ್ಟ್ರೀಯ ಭದ್ರತೆಗೆ ಮಾರಕವೇ ಸರಿ.

ಕೊನೆಯ ಹನಿದೇಶದ ಬಗ್ಗೆ ಬಧ್ಧತೆಯೇ ಇಲ್ಲದ  ಜನರು ಮೋದಿಯವರನ್ನು ವಿರೋಧಿಸುವ ರೀತಿ ಮತ್ತು ತಾರಾತುರಿಯನ್ನು ನೋಡಿದರೆಮೋದಿ ಇಂತಹ ಎಡ ಬಿಡಂಗಿಗಳಿಗೆ ತೊಡಕಾಗುವ ಏನೋ ಕೆಲಸ ಮಾಡುತ್ತಿದ್ದಾರೆಂದೆನಿಸುತ್ತದೆಮೋದಿಯೇ ಮುಂದುವರಿದರೆ  ನಿರ್ಲಜ್ಜರುಗಳಿಗೆ  ದಿನನಿತ್ಯದ ಗಂಜಿಗೇ ಗತಿ ಇಲ್ಲದ ಸ್ಥಿತಿ ಬರಬಹುದೆನಿಸುತ್ತದೆ ಒಂದೇ ಒಂದು ಕಾರಣಕ್ಕಾಗಿ ನಾನು ಮೋದಿಯವರ ಕೈ ಬಲಪಡಿಸುವ ಎಲ್ಲ ಪ್ರಯತ್ನ ಮಾಡುತ್ತೇನೆ.

ಸದಾ ನಿಮ್ಮವ,
.ನಾ.ಮಾಧವ ಭಟ್
ಮಾಘ-ಕೃಷ್ಣ-ತ್ರಯೋದಶೀ,
ಸೋಮವಾರ - ಮಹಾ ಶಿವರಾತ್ರಿ.
೦೪-೦೩-೨೦೧೯ಬೆಂಗಳೂರು.


Wednesday 20 February 2019

International Mother Language Day

ಮಾತೃ ಭಾಷೆ - ಅದು ಅಂತರಂಗದ ಭಾಷೆ.



ಫೆಬ್ರುವರಿ ೨೧ರ ಈ ದಿನವನ್ನು ಜಗತ್ತು 'ಅಂತಾರಾಷ್ಟ್ರೀಯ ಮಾತೃಭಾಷಾ ದಿನ 'ವನ್ನಾಗಿ ಆಚರಿಸುತ್ತದೆ. ಈ ಹಿನ್ನೆಲೆಯಲ್ಲಿ, ಮಾತೃಭಾಷೆಯ ಬಗ್ಗೆ ಮೆಲಕು ಹಾಕಲು ಇಚ್ಛಿಸುತ್ತೇನೆ.

ಭಾಷೆ ಮಾನವನಿಗಿರುವ ಒಂದು ಪ್ರಮುಖ ಸಂವಹನಾ ಮಾಧ್ಯಮ. ನಮ್ಮ ಭಾವನೆ, ಅನಿಸಿಕೆಗಳನ್ನು ಇತರರಿಗೆ ತಿಳಿಸಲು ಇರುವ ಸಾಧನವೆನ್ನಬಹುದು. ಹೀಗೆ ಇತರರೊಂದಿಗೆ ಸಂವಹಿಸಲು ಇರುವ ಭಾಷೆಗಳು ಹಲವು. ಆದರೆ, ನಾವು ನಮ್ಮ ಅಂತರಂಗದೊಂದಿಗೆ ಮಾತನಾಡುವ ಭಾಷೆ ಒಂದೇ - ಅದೇ ನಮ್ಮ ಮಾತೃ ಭಾಷೆ. ನಮ್ಮ ಭಾವನೆಗಳೊಂದಿಗೆ ಬೆರೆತು ಅದೂಕೂಡ ಒಂದು ಭಾವನಾತ್ಮಕ ವಿಷಯವಾಗಿದೆ. 

ಯಾವುದೇ ಭಾಷೆ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತುಕೊಂಡಿರುತ್ತದೆ. ಹಾಗಾಗಿ ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ಹಿಂದಿರುವ ಸಂಸ್ಕೃತಿಯ ಅನೇಕ ಅಂಶಗಳನ್ನು ಕಲಿಯುತ್ತೇವೆ. ಹಾಗೆಯೇ ಒಂದು ಭಾಷೆಯನ್ನು ದೂರ ಮಾಡಿಕೊಂಡಾಗ ಆ ಸಂಸ್ಕೃತಿಯ ಅನೇಕ ಅಂಶಗಳನ್ನು ದೂರ ಮಾಡಿಕೊಳ್ಳುತ್ತೇವೆ. ಈ ದೃಷ್ಟಿಯಿಂದ ನೋಡಿದಾಗ ನಮಗೆ ನಮ್ಮ ಮಾತೃಭಾಷೆಯ ಮಹತ್ವ ಅರಿವಾಗುತ್ತದೆ. ಒಬ್ಬನ ಮಾತೃಭಾಷೆ ಆತನನ್ನು ಅವನ ಮೂಲದೊಂದಿಗೆ ಜೋಡಿಸುತ್ತದೆ. ಬೇರೆ ಎಲ್ಲ ಭಾಷೆಗಳು ನಮ್ಮನ್ನು ನಮ್ಮ ಮೂಲದಿಂದ ವಿಸ್ತಾರಗೊಳಿಸುತ್ತಾ ಜಾಗತಿಕ ಮಟ್ಟಕ್ಕೆ ಏರಿಸುತ್ತವೆ. ಹಾಗಾಗಿಯೇ ಹಲವು ಭಾಷೆಗಳನ್ನು ಕಲಿಯುವುದು ಅನಿವಾರ್ಯವಷ್ಟೇ ಅಲ್ಲ ಆವಶ್ಯಕವೂ ಹೌದು.

ನಾವು ಮಾತೃ ಭಾಷೆಯ ಉಪಯೋಗ ಕಡಿಮೆ ಮಾಡಿ ಬೇರೆ ಭಾಷೆಗಳಿಗೆ ಒತ್ತು ಕೊಡುತ್ತಿದ್ದೇವೆಂದರೆ ಆ ಮಟ್ಟಿಗೆ ಬೇರೆ ಸಂಸ್ಕೃತಿಯನ್ನು ಒಳಗೆ ಬಿಟ್ಟಿದ್ದೇವೆಂದೇ ಅರ್ಥ. ಇಂದು ಆಂಗ್ಲಭಾಷೆ ಜಗತ್ತನ್ನೆಲ್ಲಾ ಆವರಿಸಿದೆಯೋ ಇಲ್ಲವೋ ಭಾರತವನ್ನಂತೂ ಬಹುವಾಗಿ ಆವರಿಸಿದೆ. ಒಂದು ಜಾಗತಿಕ ಭಾಷೆಯಾಗಿ ಆಂಗ್ಲಭಾಷೆ ನಮಗೆ ಬೇಕೇ ಬೇಕು - ಇದರಲ್ಲಿ ಸಂಶಯವೇ ಇಲ್ಲ. ಆದರೆ ಅದು ಕೇವಲ ವ್ಯಾವಹಾರಿಕ ಭಾಷೆಯಾಗದೆ ನಮ್ಮೊಳಗೆ ಇಳಿಯುತ್ತಿರುವ ವೇಗ, ಪ್ರಮಾಣ, ತೀವ್ರತೆ ಆತಂಕವನ್ನುಂಟು ಮಾಡುತ್ತದೆ. 

ವ್ಯಾವಹಾರಿಕ ಭಾಷೆಗೂ, ಮಾತೃಭಾಷೆಗೂ ನಡುವೆ ಇರುವ ವ್ಯತ್ಯಾಸವನ್ನು ಅರಿಯಲು ನಾವು ಭಾರತೀಯರು ವಿಫಲರಾಗಿದ್ದೇವೆ. ಜಪಾನ್, ಚೀನಾ, ಕೊರಿಯಾ, ಜರ್ಮನಿ, ಫ್ರಾನ್ಸ್,... ಹೀಗೆ ಅನೇಕ ದೇಶಗಳಲ್ಲಿ ಆಂಗ್ಲಭಾಷೆ ನಮ್ಮೊಳಗೆ ಹೊಕ್ಕಿರುವಷ್ಟು ಹೊಕ್ಕಿಲ್ಲ. ನಾವು ಆಂಗ್ಲಭಾಷೆಯನ್ನು ಒಂದು ಭಾಷಾ ಮಾಧ್ಯಮವನ್ನಾಗಿ ತೆಗೆದುಕೊಳ್ಳದೆ, ಒಂದು ಕಬ್ಬಿಣದ ಕಡಲೆಯಂತಿರುವ ವಿಷಯವಾಗಿ ತಿಳಿದುಕೊಂಡಿರುವುದೇ ಒಂದು ದುರಂತ. 

ಇವೆಲ್ಲದರ ಮಧ್ಯೆ, ಅನೇಕರು, ಆಂಗ್ಲಭಾಷೆಯನ್ನು ಕಲಿಯದವರ ಸ್ಥಿತಿಯನ್ನು ನೋಡಿ ತಾವು ಮಾತೃಭಾಷೆಯನ್ನು ದೂರಮಾಡುತ್ತಿರುವುದು ಮೇಲ್ನೋಟಕ್ಕೆ ವೇದ್ಯವಾಗುತ್ತಿದೆ. ಆಂಗ್ಲಭಾಷೆಯ ಜ್ಞಾನವಿಲ್ಲದಿರುವಾಗ ಜಾಗತಿಕ ಮಟ್ಟದ ವ್ಯವಹಾರ ಕಷ್ಟವಾಗುತ್ತದೆ, ಅನೇಕ ಅವಕಾಶಗಳು ಕಡಿಮೆ ಆಗುತ್ತವೆ. ಇಂತಹ ಸನ್ನಿವೇಶದಲ್ಲಿ ನಾವು ಆಂಗ್ಲಭಾಷೆಯನ್ನು ಚೆನ್ನಾಗಿ ಕಲಿಯಬೇಕೇ ಹೊರತು, ಮಾತೃಭಾಷೆಯ ಸ್ಥಾನದಲ್ಲಿ ಅದನ್ನು ಕುಳ್ಳಿರಿಸುವುವುದು ಸರಿಯಾದ ಆಯ್ಕೆಯಾಗುವುದಿಲ್ಲ. ಅನೇಕರು ಆಂಗ್ಲಭಾಷೆಯನ್ನೇ ತಮ್ಮ ಮನೆಗಳಲ್ಲಿ ನಿತ್ಯದ ಆಡುಭಾಷೆಯನ್ನಾಗಿರಿಸಿಕೊಂಡಿರುವುದು ಖೇದದ ಸಂಗತಿ.  ಇದರಿಂದ ಆಗುವ ಅಪಾಯಗಳೇ ಹೆಚ್ಚು. ಬಹುಮುಖ್ಯವಾಗಿ ನಾವು ನಮ್ಮ ಮೂಲದಿಂದ ದೂರವಾಗುತ್ತೇವೆ. ಅಂತೆಯೇ ಸಂಪೂರ್ಣ ಪಾಶ್ಚ್ಯಾತ್ಯರೂ ಆಗದೆ ತ್ರಿಶಂಕು ಸ್ಥಿತಿಯನ್ನು ತಲುಪುತ್ತೇವೆ. ಇದರ ಒಂದು ಪರಿಣಾಮವನ್ನು ನಾವು ನಮ್ಮ ಸಂಬಂಧಗಲ್ಲಿ ಕಾಣಬಹುದು. ಇಂದು ಅನೇಕರಿಗೆ ಪುರುಷರೆಲ್ಲರೂ 'ಅಂಕಲ್'ಗಳಾಗಿ ಮತ್ತು ಮಹಿಳೆಯರೆಲ್ಲರೂ 'ಆಂಟಿ'ಯಾರಾಗಿ ಕಾಣುತ್ತಾರೆ. ಅತ್ತಿಗೆ, ನಾದಿನಿ, ಬಾವ, ಬಾಮೈದ, ಚಿಕ್ಕಪ್ಪ-ದೊಡ್ಡಪ್ಪಂದಿರೆಲ್ಲಾ ಮಾಯವಾಗಿದ್ದರೆ. ಇದು ಅತ್ಯಂತ ಮೇಲಿನ ಹಂತದ ಪರಿಣಾಮ - ಇನ್ನೂ ಒಳಹೊಕ್ಕು ನೋಡಿದಾಗ ಅದರ ಆಳ ಅರಿವಾಗುತ್ತದೆ.

ಉಪಯೋಗಿಸದ ಭಾಷೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.  ಉದಾಹರಣೆಗೆ, ನಮ್ಮಲ್ಲಿ ಅನೇಕರಿಗೆ ಕನ್ನಡ ಮಾತನಾಡಲು ಬಂದರೂ, ಉಪಯೋಗಿಸದ ಕಾರಣ ಕನ್ನಡದ ಅಂಕೆ-ಸಂಖ್ಯೆಗಳ ಪರಿಚಯವಿರುವುದಿಲ್ಲ. ಅಂದರೆ, ಆಡದ ಭಾಷೆ ಉಳಿಯುವುದು ಕಷ್ಟ. ಇನ್ನು ಮಾತೃಭಾಷಾ ಶಿಕ್ಷಣ, ಸಿನಿಮಾ ಡಬ್ಬಿಂಗ್, ಅಂಗಡಿ ಮುಂಗಟ್ಟುಗಳಲ್ಲಿ ಮಾತೃಭಾಷೆ, ಬಸ್ಸು-ರೈಲು ನಿಲ್ದಾಣಗಳಲ್ಲಿ , ಸರ್ಕಾರಿ ಕಛೇರಿಗಳಲ್ಲಿ ಮಾತೃಭಾಷೆಯ ನುಡಿಗಟ್ಟುಗಳು,...ಇವಲ್ಲ ಚರ್ಚೆಯ ವಿಷಯವಾಗಬಹುದಷ್ಟೆ. ಇಂದಿನ ಸನ್ನಿವೇಶದಲ್ಲಿ ಮಾತೃಭಾಷೆಯನ್ನು ಸಂಪೂರ್ಣ ವ್ಯಾವಹಾರಿಕ ಭಾಷೆಯನ್ನಾಗಿ ಮಾಡುವುದು ಅಪ್ರಾಯೋಗಿಕ. ಆದರೆ ಅದನ್ನು ನಮ್ಮದಾಗಿಸಿಕೊಳ್ಳಬಹುದು - ಮಾತೃಭಾಷೆಯಲ್ಲಿ ಮಾತನಾಡುವ, ಓದುವ-ಬರೆಯುವ ಕೆಲಸವಾಗಬೇಕು. ನಮ್ಮ ಮಾತೃಭಾಷೆಯ ಪ್ರಧಾನ ಪ್ರಾಕಾರಗಳೆನಿಸಿದ ಜಾನಪದ-ದಾಸ ಸಾಹಿತ್ಯಗಳನ್ನು ಅಭ್ಯಸಿಸಬೇಕು. ಇವೆಲ್ಲವೂ ನಮ್ಮ ಸೃಜನಾತ್ಮಕ ಶಕ್ತಿ, ಸಂವೇದನಾ ಶಕ್ತಿಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ನಮ್ಮ ಮಾತೃಭಾಷೆಯನ್ನು ಅಭ್ಯಸಿಸಬೇಕು. ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಮಾತೃಭಾಷೆಯ ಪರಿಚಯವನ್ನು ಪೂರ್ಣವಾಗಿ ಮಾಡಿಕೊಳ್ಳಬೇಕು - ಒಟ್ಟಿನಲ್ಲಿ ಮನೆಗೆದ್ದು ಮಾರು ಗೆಲ್ಲಲು ಹೊರಡಬೇಕು.

ಕೊನೆಯ ಹನಿ: English ನಲ್ಲಿ 'ರಂಗೋಲಿ' ಹಾಕಲೂ ಆಗುವುದಿಲ್ಲ, 'ಮಡಿಬಟ್ಟೆ' ಉಡಲೂ ಆಗುವುದಿಲ್ಲ. ಎಷ್ಟೇ ಆದರೂ, 'Ragi Ball' ಗಿಂತ 'ರಾಗಿ ಮುದ್ದೆ'ಯೇ ಗಟ್ಟಿ. 'ಅನ್ನ'ಕ್ಕಿರುವ ಅಂದ 'Rice'ನಲ್ಲಿಲ್ಲ. 'ಬಾಳೆಎಲೆ ಊಟ'ದ  ಗಮ್ಮತ್ತು 'Banana leaf'ನಲ್ಲಿ ಮಾಡುವ 'Meal'ನಲ್ಲಿಲ್ಲ. ಅನೇಕರು ಮಾತೃಭಾಷೆಯಲ್ಲಿ ಸರಿಯಾಗಿ ವ್ಯವಹರಿಸಲು ಬಾರದೇ English ಗೆ ಜೋತು ಬಿದ್ದಿರುವುದನ್ನು ನಾವು ಒಂದು 'ಹೆಗ್ಗಳಿಕೆ' ಅಂದುಕೊಂಡರೆ ಅದು ಮೂರ್ಖತನವೇ ಸರಿ.


ಸದಾ ನಿಮ್ಮವ, 
ಹ.ನಾ.ಮಾಧವ ಭಟ್
ಮಾಘ-ಕೃಷ್ಣ-ದ್ವಿತೀಯಾ, ಗುರುವಾರ.
೨೧-೦೨-೨೦೧೯
ಬೆಂಗಳೂರು.
ದಿನ ವಿಶೇಷ: ಅಂತಾರಾಷ್ಟ್ರೀಯ ಮಾತೃಭಾಷಾ ದಿನ. 


Saturday 2 February 2019

Life: Sports and Sportiveness

।। ಆಟವಾಡದೇ ಇದ್ದರೂ, ಕ್ರೀಡಾ ಮನೋಭಾವ ನಮ್ಮದಾಗಿಸಿ ಕೊಳ್ಳೋಣ ।।

ತ್ತೀಚಿಗೆ ಕೆಲ ತಿಂಗಳುಗಳಿಂದ ವಾರಕ್ಕೆರಡು ಬಾರಿಯಂತೆ ಫುಟ್ಬಾಲ್ ಆಡಲು ಹೋಗುತ್ತಿದ್ದೇನೆ. ಆರಂಭದಲ್ಲಿ ಸ್ನೇಹಿತರ ಒತ್ತಾಯಕ್ಕೆ ಹೋಗಲು ಶುರು ಮಾಡಿದರೂ, ಇದುವರೆಗೂ ಒಂದೂ ಗೋಲ್ ಹೊಡೆಯದೆ ಇದ್ದರೂ, ಫುಟ್ಬಾಲ್ ಶೂ ಹಾಕಿ ರೊನಾಲ್ಡೊ ರೇಂಜ್ ಗೆ ಮೈದಾನಕ್ಕೆ ಇಳಿಯುತ್ತೇನೆ. ನನ್ನಂತೆ ಇನ್ನೂ ಕೆಲ ರೊನಾಲ್ಡೊಗಳು ಜೊತೆಗಿದ್ದಾರೆಂಬುದೇ ನನ್ನ ಧೈರ್ಯ. ಆದರೆ  ಅದೇನೋ ಗೊತ್ತಿಲ್ಲ, ಎರಡು ಗಂಟೆಗಳ ಆಟದ ನಂತರ ಮೈ-ಮನಸ್ಸುಗಳೆರಡೂ ಹಗುರವಾಗುವುದಂತೂ ನಿಶ್ಚಿತ....! ಆ ಎರಡು ಗಂಟೆಗಳ ಆಟ ಇಡೀ ದಿನದ, ಇಡೀ ವಾರದ ಚಿಂತೆಗಳನ್ನೆಲ್ಲಾ ದೂರ ಮಾಡುತ್ತದೆ. ನಾವು ಕ್ರೀಡಾಸ್ಫೋರ್ತಿಯನ್ನು ತೆಗೆದುಕೊಳ್ಳಲು ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಯ್ಲಿ ಯ ದರ್ಶನ ಮಾಡಬೇಕಿಲ್ಲ, ರೊನಾಲ್ಡೊ, ಸೆರೆನಾ ವಿಲಿಯಮ್ಸ್ ಆಟೋಗ್ರಾಫ್ ಪಡೆಯಬೇಕಿಲ್ಲ. ನಾವು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಸುತ್ತ ಮುತ್ತಲೇ ಒಬ್ಬ ಕ್ರಿಕೆಟಿಗನೋ, ಫುಟ್ಬಾಲ್ ಆಟಗಾರನೋ, ಚೆಸ್ ಚಾಂಪಿಯನ್ನೋ, ಕಬ್ಬಡ್ಡಿ ವೀರನೋ ಸಿಗುತ್ತಾನೆ..! ನಮ್ಮ ಜೊತೆ ಕೆಲಸ ಮಾಡುವ ಇಂತಹ ಕೆಲ ರೊನಾಲ್ಡೊಗಳೇ ನಮ್ಮ ಫುಟ್ಬಾಲ್ ಆಟಕ್ಕೆ ಪ್ರೇರಣೆ...!!

ಇಂದಿನ ದಿನಗಳಲ್ಲಿ ಪಾಠಗಳ ಹಾವಳಿಯಿಂದಾಗಿ ಆಟಗಳ ಸಂಖ್ಯೆ, ಉತ್ಸಾಹ ಎರಡೂ ಕೂಡಾ ಮಕ್ಕಳಲ್ಲಿಯೇ ಕಡಿಮೆಯಾಗಿದೆ. ಆಟಗಳ ಬಗೆಗಿನ ಒಟ್ಟಾರೆ ಕಲ್ಪನೆಯ ಕೊರತೆಯಿಂದಾಗಿ ಕ್ರಿಕೆಟ್ ಒಂದೇ ಆಟವಾಗಿರುವುದು ಕಂಡು ಬರುತ್ತದೆ. ಆದರೂ ಸಹ ಇತ್ತೀಚಿಗೆ ಕಬ್ಬಡ್ಡಿ & ಹಾಕಿಗಳು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿವೆ.

ಡಾ||ಹೆಡಗೇವಾರ್ 
ಆಟಗಳಿಂದ ನಾವು ಕಲಿಯುವ ಪಾಠ ಅನೇಕ. ಒಂದು ತಂಡ (ಟೀಮ್)ದ ಭಾಗವಾಗುವುದು ಹೇಗೆ ಎಂದು ಆಟಗಳು ಸುಲಭವಾಗಿ ಕಲಿಸಿಕೊಡುತ್ತವೆ. ಅದು ನಮ್ಮಲ್ಲಿರುವ ಒಂಟಿತನವನ್ನು ಹೋಗಲಾಡಿಸಿ, ಇತರರೊಂದಿಗೆ ಬೆರೆಯುವುದು ಹೇಗೆಂದು ಕಲಿಸುತ್ತದೆ. ಹೌದು, ಇನ್ನೂಚಿಕ್ಕವಳಾದ ನನ್ನ ಮಗಳು ಇಷ್ಟು ದಿನ ಒಬ್ಬಳೇ ತನ್ನ ಪಾಡಿಗೆ ತಾನು ಆಟವಾಡಿಕೊಳ್ಳುತ್ತಿದ್ದಳು, ಆದರೆ ಈಗ ದೊಡ್ಡವಳಾಗುತ್ತಾ ಆಟವಾಡಲು ಯಾರಾದರೂ ಬೇಕು ಎಂದು ಆಶಿಸುವುದನ್ನು ಗಮನಿಸುತ್ತಿದ್ದೇನೆ. ಆಟಗಳ ಆಕರ್ಷಣೆ ವ್ಯಕ್ತಿಗಳನ್ನು ಪರಸ್ಪರ ಹತ್ತಿರ ತರುತ್ತದೆ. ಹೀಗೆ ಕ್ರೀಡೆಗಳು ಕೇವಲ ಶಾರೀರಿಕ ವ್ಯಾಯಾಮವಾಗದೇ, ವ್ಯಕ್ತಿತ್ವ ನಿರ್ಮಾಣಕ್ಕೇ ಬುನಾದಿಯಾಗಬಹುದು. ಛತ್ರಪತಿ ಶಿವಾಜಿ ಮಹಾರಾಜರು ಸಾಮಾನ್ಯರಾದ  ವನವಾಸಿ ಮಾವಳಿ ಹುಡುಗರನ್ನು ಉತ್ಕೃಷ್ಟ ಸೈನಿಕರನ್ನಾಗಿ ಪರಿವರ್ತಿಸಿದ್ದು ಇದೆ ಆಟಗಳಿಂದ. ಡಾ||ಹೆಡಗೇವಾರ್ ಕೂಡ ಸಂಘಟನೆಯನ್ನು ಬೆಳೆಸಲು ಕ್ರೀಡೆಗಳನ್ನೇ ಸಾಧನವನ್ನಾಗಿ ಬಳಸಿದರು. ಹೀಗೆ ಆಟಗಳ ಶಕ್ತಿ ಅಪಾರ.

ಆಟಗಳು ಗೆಲುವು ಮತ್ತು ಸೋಲಿನ ರುಚಿ ತೋರಿಸಿಕೊಡುತ್ತವೆ. ಸೋತಾಗ ಕಹಿಯಾಗಿರುತ್ತದೆ, ಗೆದ್ದಾಗ ಸಿಹಿಯಾಗಿರುತ್ತದೆ. ಆದರೆ ಸೋತು ಗೆದ್ದಾಗ ಅದು ನವರಸ ಭಾರಿತವಾಗಿರುತ್ತದೆ - ಇದು ಆಟಗಳಿಂದ ಸಿಗುವ ಪಾಠ. ಈ ಸೋಲು-ಗೆಲುವುಗಳನ್ನು ಅರ್ಥೈಸಿಕೊಳ್ಳುವುದೇ "ಕ್ರೀಡಾ ಮನೋಭಾವ".  ಆದರೆ, ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬೆಳೆಯುವ ಮಕ್ಕಳಿಗೆ ಆಟವಾಡಲು ಶಾಲೆಗಳಲ್ಲಿ ಸರಿಯಾದ ಮೈದಾನಗಳಿಲ್ಲದಿರುವುದು ಇಂದಿನ ದುರಂತ. ಶಾಲೆಗಳು ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಗಳಂತೆ "ಕ್ರೀಡಾಂಗಣ" ಕೂಡ ಮಕ್ಕಳಿಗೆ ಅತ್ಯವಶ್ಯಕ ಎಂದು ಮನಗಾಣಬೇಕು. ಇನ್ನು ಕೆಲವು ಶಾಲೆಗಳಲ್ಲಿ, ವಸತಿ-ವಿದ್ಯಾಲಯಗಳಲ್ಲಿ ಮೈದಾನಗಳಿದ್ದೂ, ಸಿಲಬಸ್ ಎಂಬ ಸೈತಾನನಿಂದಾಗಿ ಮಕ್ಕಳು ಆಟವಾಡದಂತಾಗಿದೆ. ಪರಿಣಾಮವಾಗಿ ಕ್ರೀಡಾಮನೋಭಾವ ಕಡಿಮೆಯಾಗುತ್ತಿದೆ.

ಸುದ್ದಿ ಮಾಧ್ಯಮಗಳಲ್ಲಿ ನೋಡಿದಂತೆ, ಒಂದು ಅಂಕದಿಂದ ಫೇಲ್ ಅದರಿಂದ ಹಿಡಿದು ಅದೇ ಒಂದು ಅಂಕದಿಂದ ಮೊದಲ ರ‍್ಯಾಂಕ್‌ ತಪ್ಪಿಸಿಕೊಂಡವರವರೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಸರಿಯಾಗಿ ರೂಪಿಸದ ಪೋಷಕರ, ಅಧ್ಯಾಪಕರ, ಶಾಲಾ-ಕಾಲೇಜುಗಳ, ಒಟ್ಟಾರೆ ಸಮಾಜದ ಬೇಜವಾಬ್ದಾರಿ ನೆಡೆ ಎಂದೆನಿಸುತ್ತದೆ.

ನಾವು ದೊಡ್ಡವರಾಗುತ್ತಾ ಆಟ ಆಡುವುದನ್ನು ಕಡಿಮೆ ಮಾಡುತ್ತೇವೆ - ಮುಂದುವರಿದು ನಿಲ್ಲಿಸಿಯೇ ಬಿಡುತ್ತೇವೆ. ಇನ್ನು ಕೆಲವರಂತೂ, ಆಟವಾಡುವುದು ಮಕ್ಕಳು ಮಾತ್ರವೆಂದು ನಂಬಿ - 'ಆಟವಾಡಲು ನಾವೇನು ಮಕ್ಕಳೇ?!' ಎಂಬ ಉದ್ಗಾರ ತೆಗೆಯುತ್ತಾರೆ. ಇಂದು ದೊಡ್ಡವರಲ್ಲಿ ಕೂಡ ಕ್ರೀಡಾ ಮನೋಭಾವ ಕಡಿಮೆಯಾಗಿರುವುದು ಅನುಭವಕ್ಕೆ ಬರುತ್ತದೆ. ಅನಾವಶ್ಯಕ ಸ್ಪರ್ಧೆ, ಸೋಲಿನ ಸೇಡು, ಗೆಲುವಿಗಾಗಿ ಅಡ್ಡದಾರಿ ಇವೆಲ್ಲವೂ ಬದುಕೆಂಬ ಆಟವನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಮಾನಸಿಕ ಸ್ಥಿತಿಗಳಾಗಿವೆ. ಮೈದಾನದಲ್ಲಿ ಆಡುವುದರ ಜೊತೆಗೆ, ಬದುಕೆಂಬ ಆಟವನ್ನು "ಕ್ರೀಡಾ ಸ್ಫೂರ್ತಿ"ಯಿಂದಲೇ ಆಡೋಣ. ಗೆದ್ದರೆ ಖುಷಿ ಪಡೋಣ, ಸೋತರೆ ಇನ್ನೂ ಸಂತೋಷಿಸೋಣ, ಏಕೆಂದರೆ ಸೋಲಿನ ನಂತರದ ಗೆಲುವಿನ ರುಚಿ ಅನುಭವಿಸಿದವರಿಗಷ್ಟೇ ತಿಳಿದ ರಹಸ್ಯ...!!

ಆಶಯ: 30x40  ಕೊಠಡಿಯಲ್ಲಿ ಕಲಿತು, 30x40  ಮನೆಯಲ್ಲಿ ವಾಸಮಾಡಿ, ದೊಡ್ಡ ಕಂಪನಿ ಗಳ ಬೃಹದಾಕಾರದ ಕಟ್ಟಡಗಳಲ್ಲಿ, ಮೊದಲೇ ನಿಗದಿ ಪಡಿಸಿದ 3x4 ಜಾಗದಲ್ಲಿ ಕುಳಿತು ಕೆಲಸ ಮಾಡಿ, ಕೊನೆಯಲ್ಲಿ 3x4 ಗುಂಡಿಯಲ್ಲಿ ಮಲಗುವ ಮೊದಲು ದೊಡ್ಡ ಮೈದಾನಗಳಿಗೆ ಇಳಿದು ಆಟವಾಡೋಣವೇ? - ಕ್ರೀಡಾಮನೋಭಾವವನ್ನು ನಮ್ಮದಾಗಿಸಿಕೊಳ್ಳೋಣವೇ?

ನಿಮ್ಮವ,
ಹ.ನಾ.ಮಾಧವ ಭಟ್ 
ಪುಷ್ಯ-ಕೃಷ್ಣ-ತ್ರಯೋದಶಿ, ಶನಿವಾರ.
೦೨-೦೨-೨೦೧೯
ಬೆಂಗಳೂರು.